ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ನೂತನ ಎನ್ ಸಿ ಸಿ ಕೆಡೆಟ್ ಗಳ ಪರಿಚಯ ಕಾರ್ಯಕ್ರಮ

ಕಾರ್ಕಳ: ಕ್ರಿಯೇಟಿವ್ ಕಾಲೇಜು, ಕಾರ್ಕಳದಲ್ಲಿ ನೂತನವಾಗಿ ಸೇರ್ಪಡೆಯಾದ ಎನ್‌ಸಿಸಿ ಕೆಡೆಟ್‌ಗಳಿಗಾಗಿ ಎನ್‌ಸಿಸಿ ಪರಿಚಯ ಕಾರ್ಯಕ್ರಮವನ್ನು ಆಗಸ್ಟ್ 6 ರಂದು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ವಹಿಸಿದ್ದರು. 6 ಕರ್ನಾಟಕ ನೌಕಾದಳ ಎನ್‌ಸಿಸಿ ಘಟಕ, ಉಡುಪಿಯ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ. ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅತಿಥಿಗಳನ್ನು ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿ ಸಬ್ ಲೆಫ್ಟಿನೆಂಟ್ ಮಹೇಶ್ ಆರ್. ಶೆಣೈ ಕೆ. ವೇದಿಕೆಗೆ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಪಿಐ ಸ್ಟಾಫ್ ನೃಪತ್‌ರಾಜ್ ಸಿಂಗ್ ಉಪಸ್ಥಿತರಿದ್ದರು. ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮುಖ್ಯ ಅತಿಥಿಗಳು ಎನ್‌ಸಿಸಿಯ ಉದ್ದೇಶ, ಶಿಸ್ತು, ನಾಯಕತ್ವ, ದೇಶಭಕ್ತಿ ಹಾಗೂ ಎನ್‌ಸಿಸಿ ಮೂಲಕ ದೊರೆಯುವ ವಿವಿಧ ತರಬೇತಿ ಮತ್ತು ವೃತ್ತಿ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಅವರು ವಿದ್ಯಾರ್ಥಿಗಳು ಎನ್‌ಸಿಸಿಯ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ರಾಷ್ಟ್ರಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ಮುಖ್ಯ ಅತಿಥಿಗಳನ್ನು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ವಂದನಾರ್ಪಣೆ ಹಾಗೂ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಮಾಪ್ತಿಯಾಯಿತು.

Leave a Reply

Your email address will not be published. Required fields are marked *