ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ 2026-27 ನೇ ಶೈಕ್ಷಣಿಕ ವರ್ಷದ ಹಿರಿಯ ಪ್ರಾಥಮಿಕ ಶಾಲಾ ಪೋಷಕರ ಸಮನ್ವಯ ಕಾರ್ಯಕ್ರಮವು ರೇಷ್ಮಾ ಮೆಮೋರಿಯಲ್ ಆಡಿಟೋರಿಯಂ ನಲ್ಲಿ ನಡೆಯಿತು. ತಾಯಿ ಭಾರತ ಮಾತೆಗೆ ದೀಪವನ್ನು ಬೆಳಗುವುದರ ಮೂಲಕ ಚಾಲನೆಗೊಂಡ ಈ ಕಾರ್ಯಕ್ರಮಕ್ಕೆ ಹಿರಿಯ ಸಮಾಲೋಚಕರು, ಮಾನಸಿಕ ಆರೋಗ್ಯ ಶಿಕ್ಷಣತಜ್ಞರು, ಸಂಪರ್ಕ ಮತ್ತು ತರಬೇತಿ ತಂತ್ರಜ್ಞರು ಆಗಿರುವ ಜೋಯಲ್ ಕೆ ಟಾಮ್ ಮುಖ್ಯ ಅತಿಥಿಗಳಾಗಿ ಆಗಮಿಸಿದರು.












ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರರಾಗಿರುವ ರಮೇಶ್ ಕೆ ಅವರು ನಮ್ಮ ನಗರದ ಸುಮಾರು 225 ಸ್ಥಳಗಳಿಂದ ಹಾಗೂ ರಾಜ್ಯದ 31 ಜಿಲ್ಲೆಗಳಿಂದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ವಿದ್ಯಾರ್ಜನೆಗಾಗಿ ಬರುತ್ತಿದ್ದಾರೆ. ನಮ್ಮಉದ್ಧೇಶ ಭಾರತೀಯ ಸಂಸ್ಕೃತಿ, ಮೌಲ್ಯದ ಜೊತೆಗೆ ಒಳ್ಳೆಯ ಸಂಸ್ಕಾರದ ಶಿಕ್ಷಣ ನೀಡುವುದಾಗಿದೆ. ಬೋಧಮಾಲ ಎನ್ನುವ ಒಂದು ವಿಶೇಷ ಪಠ್ಯಕ್ರಮದ ಮೂಲಕ ನಮ್ಮ ಮಕ್ಕಳಿಗೆ ಭಾರತದ ಪವಿತ್ರ ಸಂಸ್ಕೃತಿ ಸಂಪ್ರದಾಯದ ಪರಿಚಯವನ್ನು ನೀಡಲಾಗುತ್ತದೆ ಎಂದು ಹೇಳಿದರು. ಬಳಿಕ ಮಾತನಾಡಿದ ಮುಖ್ಯ ಅತಿಥಿಗಳಾದ ಜೋಯಲ್ ಕೆ ಟಾಮ್ ಅವರು ಮಾತನಾಡಿ ಹಲವು ಕಡೆಗಳಿಂದ ಬರುವಂತಹ ಒತ್ತಡಗಳಿಂದ ಮಕ್ಕಳು ಗೊಂದಲಕ್ಕೊಳಗಾಗುತ್ತಾರೆ. ಈ ಎಲ್ಲಾ ಗೊಂದಲಗಳಿಂದ ಮಕ್ಕಳನ್ನು ಹೊರತಂದು ಅವರಗುರಿ ಸಾಧನೆಗಾಗಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ತರವಾದದ್ದು. ಮಕ್ಕಳ ಶಿಕ್ಷಣ ಪ್ರಯಾಣ ಮನೆಯಿಂದಲೇ ಪ್ರಾರಂಭವಾಗಬೇಕು. ಹದಿಹರೆಯದ ಮಕ್ಕಳ ಕೆಲವು ಮಾನಸಿಕ ಸ್ಥಿತಿಗತಿಯ ಬಗ್ಗೆ ಮಾತನಾಡಿದ ಇವರು ಪೋಷಕರಿಗೆ ಇದರ ಬಗ್ಗೆ ಅರಿವು ಇರಬೇಕು. ಈ ಕುರಿತು ಪೋಷಕರು ನಿರಂತರವಾಗಿ ಶಿಕ್ಷಕರ ಸಂಪರ್ಕದಲ್ಲಿರಬೇಕು ಎಂದರು. ಬಳಿಕ ಅನೇಕ ಪೋಷಕರು ಇವರೊಂದಿಗೆ ಸಂವಾದದಲ್ಲಿ ಭಾಗವಿಹಿಸದರು.
ನಂತರ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸೇರಿ ಮುಖ್ಯ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಬಳಿಕ ಪೋಷಕರನ್ನು ಉದ್ಧೇಶಿಸಿ ಮಾತನಾಡಿದ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಡಾ. ಸುರೇಖಾ ಭಟ್ ಇವರು ಮಗು ಒಂದು ದೀಪವಿದ್ದಂತೆ, ಪೋಷಕರು ಹಾಗೂ ಶಿಕ್ಷಕರು ಆ ದೀಪವು ಆರದಂತೆ ಕಾಪಾಡುವ ಹಸ್ತಗಳು ಎಂದರು. ಬಳಿಕ 2026-27 ರ ಸಂಪೂರ್ಣ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪೋಷಕರಿಗೆ ನೀಡಿದರು. ನಂತರ ಮಾತಾಡಿದ ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ವಿಧ್ಯಾರ್ಥಿಗಳ ಉತ್ತಮ ಸಾಧನೆಗೆ ಕೇವಲ ಸಂಸ್ಥೆ, ಶಿಕ್ಷಕರು ಮಾತ್ರ ಸಾಕಾಗಲ್ಲ, ಮಗುವಿನ ಅವಿರತ ಪ್ರಯತ್ನ ಹಾಗೂ ಪೋಷಕರ ನಿರಂತರ ಪ್ರೋತ್ಸಾಹ ಅಗತ್ಯ. ಮಕ್ಕಳು ತನ್ನಗುರಿಯನ್ನು ಇಟ್ಟುಕೊಳ್ಳುವುದರಲ್ಲಿ ಪೋಷಕರ ಮಾರ್ಗದರ್ಶನ ಅಮೂಲ್ಯವಾದದ್ದು ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿಯಾಗಿರುವ ಡಾ. ಕೆ ಸಿ ನಾೈಕ್ ಅವರು ಮಕ್ಕಳು ದೇಶದ ಸಂಪತ್ತಾಗಬೇಕು, ಹಾಗೆ ಆಗಬೇಕಾದರೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರು ಹಾಗೂ ಶಿಕ್ಷಕರು ಜೊತೆಯಾಗಿ ಕಾರ್ಯಪ್ರವೃತ್ತರಾಗಬೇಕು, ಮಕ್ಕಳ ಲೋಪದೋಷಗಳನ್ನು ಎಳವೆಯಲ್ಲಿಯೇ ಕಿವುಚಿ ಹಾಕಬೇಕು ಎಂದರು. ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಶಿಕ್ಷಕಿ ಚೇತನಾತಲಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಶಿಕ್ಷಕಿ ನಯನಾ ಸ್ವಾಗತಿಸಿದರು ಹಾಗೂ ಶಕ್ತಿ ವಸತಿ ಶಾಲೆಯ ಶಿಕ್ಷಕಿ ಅಕ್ಷಿತಾ ಶೆಟ್ಟಿ ಧನ್ಯವಾದವನ್ನು ಸಮರ್ಪಿಸಿದರು.
