ಮಂಗಳೂರು : ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ–ದುರ್ಗಾವಾಹಿನಿ ಶ್ರೀ ವೈದ್ಯನಾಥ ಶಾಖೆ ಶಕ್ತಿನಗರ ಸಹಕಾರದೊಂದಿಗೆ ಶ್ರೀ ಗುರು ದತ್ತಾತ್ರೇಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪ್ರಥಮ ವರ್ಷದ ‘ಹಿಂದು ಮಹಾ ಶಕ್ತಿ ಗಣಪತಿ’ ಉತ್ಸವವು ಸೆ. 14 ರಂದು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಬಳಿಯಿರುವ ಛತ್ರಪತಿ ಶಿವಾಜಿ ವೃತ್ತದ ಬಳಿ ನಡೆಯಲಿದೆ.

ಉತ್ಸವದ ಅಂಗವಾಗಿ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ. 14 ಬೆಳಗ್ಗೆ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಇವರ ಪೌರೋಹಿತ್ಯದಲ್ಲಿ ನಾನಾ ವೈದಿಕ ಕಾರ್ಯಗಳು ನಡೆಯಲಿವೆ. ಬೆಳಗ್ಗೆ 8.45ಕ್ಕೆ ಶ್ರೀ ಗಣಪತಿ ದೇವರ ಬಿಂಬ ಪ್ರತಿಷ್ಠೆ ಹಾಗೂ ಗಣಹೋಮ, 10.30ಕ್ಕೆ ವಿಶ್ವ ಹಿಂದೂ ಪರಿಷತ್ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರ ಶಕ್ತಿನಗರದ ಮಕ್ಕಳಿಂದ ಭಜನಾ ಕಾರ್ಯಕ್ರಮ ಮತ್ತು ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 2 ರಿಂದ 4 ರವರೆಗೆ ಸ್ಥಳೀಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 4ಕ್ಕೆ ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. 5ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಉದ್ಯಮಿ ಸೀತಾರಾಮ ಶೆಟ್ಟಿ ವಹಿಸಲಿದ್ದಾರೆ. ಉದ್ಯಮಿ ಅವಿನಾಶ್ ಅಂಚನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಶ್ವ ಹಿಂದೂ ಪರಿಷತ್ ನಾಗೂರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ಪ್ರಸ್ತಾವಿಕ ಭಾಷಣ ಮಾಡಲಿದ್ದು, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ ಪ್ರಮುಖ ಭಾಷಣಕಾರರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಶ್ರೀಕೃಷ್ಣ ಬಾಲಸಂಸ್ಕಾರ ಕೇಂದ್ರ ಶಕ್ತಿನಗರದ ಮಾತಾಜಿ ರಮಾದೇವಿ, ವಿಶ್ವ ಹಿಂದೂ ಪರಿಷತ್ ಶ್ರೀ ವೈದ್ಯನಾಥ ಶಾಖೆ ಶಕ್ತಿನಗರ ಅಧ್ಯಕ್ಷ ಪ್ರಸಾದ್ ಕುಂಟಲ್ಪಾಡಿ ಉಪಸ್ಥಿತರಿರಲಿದ್ದಾರೆ. ಸಂಜೆ 6ಕ್ಕೆ ಮಹಾಪೂಜೆ ಹಾಗೂ 6.30ಕ್ಕೆ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಶ್ರೀ ಹಿಂದೂ ಮಹಾ ಶಕ್ತಿ ಗಣಪತಿಯ ಭವ್ಯ ಶೋಭಾಯಾತ್ರೆಯು ಶಕ್ತಿನಗರದ ಶಿವಾಜಿ ವೃತ್ತದಿಂದ ಹೊರಟು ಶಕ್ತಿನಗರದ ಮುತ್ತಪ್ಪ ಗುಡಿ ದೇವಸ್ಥಾನದವರೆಗೆ ಹೋಗಿ ತಿರುಗಿ ಪಡೀಲ್ ಬೈರಾಡಿ ಕೆರೆಯಲ್ಲಿ ಶ್ರೀ ಮಹಾಗಣಪತಿ ದೇವರ ವಿಗ್ರಹವನ್ನು ಜಲ ಸ್ತಂಭನಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
