ಅಜೆಕಾರು ಜ್ಞಾನಸುಧಾದಲ್ಲಿ ಅರ್ಥಪೂರ್ಣ ಗುರುಪೌರ್ಣಮಿ ಆಚರಣೆ

ಅಜೆಕಾರು: ಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು, ಪದ್ಮನಗರದಲ್ಲಿ ಗುರುಪೌರ್ಣಮಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಅಧ್ಯಾಪಕಿ ಭಾರತಿ ಹೆಗ್ಡೆ ಮಾತನಾಡಿ, “ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕಿನ ಮಾರ್ಗವನ್ನು ತೋರಿಸುವವನೇ ನಿಜವಾದ ಗುರು” ಎಂದು ತಿಳಿಸಿದರು. ಮಹರ್ಷಿ ವೇದವ್ಯಾಸರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಗುರುಪೌರ್ಣಮಿಯ ಮಹತ್ವವನ್ನು ವಿವರಿಸಿ, ಗುರು-ಶಿಷ್ಯ ಪರಂಪರೆಯ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಅಲ್ಲದೆ, ಮಹರ್ಷಿ ವೇದವ್ಯಾಸರ ಜಯಂತಿಯ ಶುಭಾಶಯಗಳನ್ನು ತಿಳಿಸಿ ಸರ್ವರನ್ನು ಆಶೀರ್ವದಿಸಿದರು.

ಪ್ರಾಂಶುಪಾಲರಾದ ಸಂತೋಷ್ ಮಾತನಾಡಿ, ಮಣ್ಣಿನ ಮುದ್ದೆಯಾಗಿದ್ದ ನಮ್ಮನ್ನು ಸುಂದರ ಮೂರ್ತಿಯನ್ನಾಗಿಸಿದ ಗುರುಗಳಿಗೆ ಕೃತಜ್ಞತಾಪೂರ್ವಕ ನಮಸ್ಕಾರ ಸಲ್ಲಿಸಿದರು. ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಅವರು, ಅನಾದಿಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ವಿಶೇಷ ಸ್ಥಾನಮಾನವಿದ್ದು, ಅವರ ಮಾರ್ಗದರ್ಶನವೇ ಜೀವನದ ಯಶಸ್ಸಿನ ಭದ್ರ ಬುನಾದಿಯಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಎಲ್ಲ ಗುರು ವೃಂದಕ್ಕೂ ಗುರುಪೌರ್ಣಮಿಯ ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮದಲ್ಲಿ ಎಪಿಆರ್‌ಒ ರಾಮಚಂದ್ರ ನೆಲ್ಲಿಕಾರ್ ಉಪಸ್ಥಿತರಿದ್ದರು. ಉಪಪ್ರಾಂಶುಪಾಲೆ ಆರತಿ ಅವರು ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಗುರುವಿನ ಧ್ಯಾನದೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ನಂತರ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ನಾಯಕರು ಮುಖ್ಯ ಅತಿಥಿ ಭಾರತಿ ಹೆಗ್ಡೆಯವರ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.

ವಿದ್ಯಾರ್ಥಿನಿ ನಿಶ್ಮಾ ಎಸ್. ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *