ಶಿಕ್ಷಕ ಪ್ರೇರಕ – ಭಾವಗೀತೆ- ✍️ ಚಿಮಕ

✍️ ಚಿಮಕ
ಚಿದಾನಂದ ಮಲ್ಲಿಕಾರ್ಜುನ ಕಲ್ಯಾಣಿ

ಅಕ್ಷರ ಅಕ್ಷರ ಅಚ್ಚೊತ್ತಿ ಬರೆದವನೇ,
ನಮ್ಮ ಬಾಳಿಗೆ ನೀನೇ ಗುರುವೇ…
ಮಮತೆಯ ಮಡಿಲಲಿ ಜ್ಞಾನವ ನೀಡಿದ,
ದೇವರಿಗಿಂತಲೂ ಮಿಗಿಲು ನೀ ಗುರುವೇ!

ಓ ಗುರುವೇ ನಿನ್ನ ಶ್ರೀ ಚರಣಗಳಿಗೆ,
ನಮಿಸುವೆವು ನೂರು ಬಾರಿ,
ವಾತ್ಸಲ್ಯದಿಂದ ವಿದ್ಯೆಯನ್ನು ನೀಡಿ,
ತೋರಿರುವೆ ಬಾಳ ದಾರಿ…

ದೇವರಿಗಿಂತಲೂ ಮಿಗಿಲು ನೀ ಗುರುವೇ…!
ಗುರುವೇ… ಗುರುವೇ…! ಮಹಾ ಗುರುವೇ..

ಕತ್ತಲೆಯಾಗಿದ್ದ ಮನದ ಅಂಗಳಕೆ,
ಜ್ಞಾನದ ಜ್ಯೋತಿಯ ತಂದೆ ನೀನು,
ತೋದಲ ನುಡಿಗಳ ತಿದ್ದಿ ತೀಡಿ,
ಮಾತಿನ ಮಾಣಿಕ್ಯ ತಂದೆ ನೀನು!

ಅಂಜಿಕೆ ಅಳಿಸಿ, ನಂಬಿಕೆ ಬಿತ್ತಿ,
ನಗೆಯನು ಹರಿಸಿದ ಜ್ಞಾನ ದಾತ ನೀನು,
ಸೋಲುವ ಹಾದಿಗೆ ಗೆಲುವಿನ ಸ್ಪೂರ್ತಿಯ ತುಂಬಿದ,
ಕರುಣೆಯ ಕಡಲು ನೀನು!

ಓ ಗುರುವೇ, ನಿನ್ನ ಶ್ರೀಚರಣಗಳಿಗೆ,
ನಮಿಸುವೆವು ನೂರು ಬಾರಿ,
ವಾತ್ಸಲ್ಯದಿಂದ ವಿದ್ಯೆಯನ್ನು ನೀಡಿ,
ತೋರಿರುವೆ ಬಾಳ ದಾರಿ…

ದೇವರಿಗಿಂತಲೂ ಮಿಗಿಲು ನೀ ಗುರುವೇ…!
ಗುರುವೇ… ಗುರುವೇ…! ಮಹಾಗುರುವೇ…

ಕತ್ತಲೆಯಾಗಿದ್ದ ಮನದಂಗಳಕೆ,
ಜ್ಞಾನದ ಜ್ಯೋತಿಯ ತಂದೆ ನೀನು,
ತೋದಲ ನುಡಿಗಳ ತಿದ್ದಿ ತೀಡಿ,
ಮಾತಿನ ಮಾಣಿಕ್ಯ ತಂದೆ ನೀನು!

ಅಂಜಿಕೆ ಅಳಿಸಿ, ನಂಬಿಕೆ ಬಿತ್ತಿ,
ನಗೆಯನು ಹರಿಸಿದ ಜ್ಞಾನದಾತ ನೀನು,
ಸೋಲುವ ಹಾದಿಗೆ ಗೆಲುವಿನ ಸ್ಫೂರ್ತಿಯ ತುಂಬಿದ,
ಕರುಣೆಯ ಕಡಲು ನೀನು!

ಜ್ಞಾನ ಹಂಚುವ ಶುದ್ಧ ಸ್ಫಟಿಕ,
ತರಗತಿಯ ಕೋಣೆಯ ಧೀರ ಚಾಲಕ!
ಮಕ್ಕಳ ನೆಚ್ಚಿನ ಒಲವಿನ ತಾರಕ,
ಜ್ಞಾನದ ಪುಸ್ತಕದ ಮುಕ್ತ ಮುಕ್ತಕ!

ಒಟ್ಟಾರೆ ಇವನ ವ್ಯಕ್ತಿತ್ವವೇ ಜಗಕೆ ಪಾರದರ್ಶಕ,
ಇವನೇ ಮಕ್ಕಳ ಬಾಳಿಗೆ ಧ್ರುವತಾರೆಯ ಪ್ರೇರಕ!
ತನ್ನ ಆರೋಗ್ಯದ ಚಿಂತೆಯನ್ನೇ ಮರೆತವನು,
ಮಕ್ಕಳ ಕನಸಿನ ದಾರಿಗೆ ಆನಂದ ರೂಪವಾಗಿ ನಿಂತವನು.

ಬಳಪದ ಕಣಗಳು ಶ್ವಾಸ ಸೇರಿದರು,
ಪಾಠ ಕಲಿಸುವ ಉತ್ಸಾಹ ಬಿಡಲಾರನು,
ನೋವಿನ ಕತ್ತಲೆ ತನಗಿದ್ದರೂ,
ಮಕ್ಕಳ ಬಾಳಿಗೆ ಬೆಳಕಾಗುವನು,

ಕೋಪದ ರೂಪದಲ್ಲೂ ಪ್ರೀತಿಯ ಹಂಚುವ,
ಕರುಣಾಮಯಿ ಇವನು,
ಜಗದ ಶ್ರೇಷ್ಠ ಜೀವಿಯಾಗಿ,
ಇತಿಹಾಸದ ಪುಟದಲಿ ಅಮರವಾಗಿ ಉಳಿಯುವನು!

ಗುರುವೇ ಮಹಾಗುರುವೇ, ಜ್ಞಾನ ಸಾಗರದ ತೀರವೇ,
ನಿನ್ನ ಋಣ ತೀರದು ಎಂದಿಗೂ, ನೀನೇ ಬಾಳಿನ ದಾರಿದೀಪವೇ,
ಗುರುವೇ ಮಹಾಗುರುವೇ, ಜಗದ ಜ್ಞಾನ ಜ್ಯೋತಿಯೇ,
ಮೇಣದ ಹಾಗೆ ಕರಗುವ, ಮಕ್ಕಳ ಬಾಳಿನ ನಂದಾದೀಪವೇ!

ಗುರುವೇ.. ಮಹಾಗುರುವೇ.. ನಿನಗೆ ಕೋಟಿ ನಮನಗಳು,
ನಿನ್ನ ಋಣವನು ತೀರಿಸಲು ಸಾಲದು ಈ ಜನ್ಮದ ದಿನಗಳು!
ನೀನಿಟ್ಟ ಅಕ್ಷರದ ಬೆಳಕಿನಲಿ ಬೆಳಗಲಿ ನಮ್ಮ ಏಳು ಜನ್ಮಗಳು,
ನಿನ್ನ ಪ್ರೀತಿಯ ಚರಣಕೆ ಅರ್ಪಿತ ನಮ್ಮ ಜೀವ-ಭಾವಗಳು!

Leave a Reply

Your email address will not be published. Required fields are marked *