ವರದಿ ರಾಯಿ ರಾಜ ಕುಮಾರ
ಸರಕಾರದ ರೈತ ವಿರೋಧಿ ನೀತಿಯಿಂದಾಗಿ ರೈತರ ಬದುಕು ದುರವಸ್ಥೆತೆಗೆ ಈಡಾಗಿದೆ. ರೈತರು ಬೆಳೆದ ಕೃಷಿ ಮತ್ತು ಹೈನುಗಾರಿಕೆಗಳಿಗೆ ಮೌಲ್ಯಾಧಾರಿತ ಬೆಲೆಯನ್ನು ನಿಗದಿಗೊಳಿಸಬೇಕೆಂದು ಕಿಸಾನ್ ಸಂಘ ಹೋರಾಟ ನಡೆಸಿಕೊಂಡು ಬರುತ್ತಿದೆ.

ಸರಕಾರ ರೈತರಿಗೆ ಪ್ರೋತ್ಸಾಹ ಧನ ಸೇರಿ ಕೇವಲ 42 ರೂ. ನೀಡುತ್ತಿದೆ. ಅದನ್ನು 65 ರೂಪಾಯಿಗೆ ನಿಗದಿಗೊಳಿಸಬೇಕು. ಹಲವು ತಿಂಗಳುಗಳಿಂದ ಬಾಕಿ ಇರಿಸಿಕೊಂಡಿರುವ ಪ್ರೋತ್ಸಾಹ ಧನವನ್ನು ರೈತರ ಖಾತೆಗೆ ಬಿಡುಗಡೆಗೊಳಿಸಬೇಕು.
ಪುರಸಭಾ ವ್ಯಾಪ್ತಿಯಿಂದ 3 ಕಿಲೋಮೀಟರ್ ವ್ಯಾಪ್ತಿಯವರೆಗೆ ಅಕ್ರಮ ಸಕ್ರಮ ಆಸ್ತಿ ಮಂಜೂರು ಮಾಡುವಂತಿಲ್ಲ ಎಂಬ ಕಾಯ್ದೆಗೆ ತಿದ್ದುಪಡಿ ತರಬೇಕು. ಸಮಿತಿಯಲ್ಲಿ ಮಂಡಿಸದೆಯೇ ವಜಾಗೊಳಿಸುವ ಆದೇಶವನ್ನು ಹಿಂಪಡೆಯಬೇಕು. ಕೃಷಿ ಮಾಡಿದವನೇ ಭೂಮಿಯ ಒಡೆಯ ಎಂದು ಘೋಷಿಸಿ ಹಕ್ಕುಪತ್ರ ನೀಡಬೇಕು. ಕುಮ್ಕಿ ಆಸ್ತಿಗೆ ಹಕ್ಕುಪತ್ರ ರೈತನಿಗೆ ನೀಡಬೇಕು.
ಪ್ರಕೃತಿ ವಿಕೋಪದಿಂದ ನಾಶವಾದ ಒಂದು ಮರಕ್ಕೆ 20000 ಇಂದ 25,000 ವರೆಗೆ ವೈಜ್ಞಾನಿಕ ಪರಿಹಾರವನ್ನು ನೀಡುವಂತಾಗಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಮೇ 29 ಶುಕ್ರವಾರದಂದು ಮೂಡುಬಿದಿರೆ ಸರಕಾರಿ ಆಸ್ಪತ್ರೆಯ ಎದುರುಗಡೆಯಿಂದ ತಹಸಿಲ್ದಾರ ಕಚೇರಿಯ ವರೆಗೆ ರೈತರ ಪ್ರತಿಭಟನ ಜಾಥಾ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕಿಸಾನ್ ಸಂಘದ ಪ್ರಮುಖ, ಪ್ರಗತಿಪರ ಕೃಷಿಕ ಜಾಯ್ಲಸ್ ಡಿಸೋಜ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ತಾಲೂಕು ಉಪಾಧ್ಯಕ್ಷ ವಲೇರಿಯನ್ ಕುಟಿನೊ, ಪ್ರಧಾನ ಕಾರ್ಯದರ್ಶಿ ವಸಂತ್ ಭಟ್ ಪಯ್ಯಾಡಿ, ನೇಮಿರಾಜ ಹಾಗೂ ಇತರರರು ಹಾಜರಿದ್ದರು.
