ಧರ್ಮಸ್ಥಳ: ತುಳುನಾಡಿನ ದೈವ ಆರಾಧನೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ‘ಶ್ರೀಗಣ’ ಕಿರುಚಿತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಜೂನ್ 9, 2026 ರಂದು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.

ಬಿಡುಗಡೆ ಬಳಿಕ ಕಿರುಚಿತ್ರವನ್ನು ವೀಕ್ಷಿಸಿದ ಪೂಜ್ಯ ಹೆಗ್ಗಡೆ ದಂಪತಿಗಳು, ತುಳುನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ದೈವ ಆರಾಧನೆಯ ಮಹತ್ವವನ್ನು ಪರಿಣಾಮಕಾರಿಯಾಗಿ ಚಿತ್ರಿಸಿರುವ ಯುವಕರ ಪ್ರಯತ್ನವನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಅವರು ಕಿರುಚಿತ್ರವನ್ನು ವೀಕ್ಷಿಸಿ, ಚಿತ್ರದ ಕಲಾವಿದರು ಹಾಗೂ ತಾಂತ್ರಿಕ ತಂಡಕ್ಕೆ ಶುಭ ಹಾರೈಸಿದರು.
ಎಸ್ ಡಿ ಎಂ ಕಲಾಕೇಂದ್ರದ ಪೋಷಕರಾದ ಸೋನಿಯಾ ಯಶೋವರ್ಮ ರವರು ಕೂಡ ಕಿರು ಚಿತ್ರ ವೀಕ್ಷೀಸಿ ಯುವಕರ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರು.
ಸುಮಾರು 15 ನಿಮಿಷಗಳ ಅವಧಿಯ ಈ ಕಿರುಚಿತ್ರವು ತುಳುನಾಡಿನ ದೈವ ಆರಾಧನೆಯ ಹಿನ್ನೆಲೆಯ ಕಥಾವಸ್ತುವನ್ನು ಒಳಗೊಂಡಿದ್ದು, ಯುವಕರು ಮತ್ತು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿದೆ. ಕಿರುಚಿತ್ರದ ನಿರ್ಮಾಪಕರಾಗಿ ಕಾರ್ತಿಕ್ ಸುಬ್ರಹ್ಮಣ್ಯ, ರಚನೆ ಹಾಗೂ ನಿರ್ದೇಶನವನ್ನು ನೂತನ ಅಮೀನ್, ಕಥೆ ಮತ್ತು ಸಂಭಾಷಣೆಯನ್ನು ಸುಜಿತ್ ಸೂರ್ಯ ನಿರ್ವಹಿಸಿದ್ದಾರೆ.
ಭೂಷಣ್ ಪೂಜಾರಿ ಸಂಗೀತ ಸಂಯೋಜನೆ ಮಾಡಿದ್ದು, ಸಮರ್ಥನ್ ರಾವ್ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಗಗನ್ ರಾಜ್ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಸುಬ್ರಹ್ಮಣ್ಯದ ಸ್ಥಳಿಯರಾದ ರೋಹಿತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಕಾರ್ತಿಕ್ ಶೋಬಿತ್, ಕಿರಣ್, ಜಯರಾಮ್ , ರಾಜಾರಾಮ್ ಹಾಗೂ ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಿರುಚಿತ್ರದ ನಿರ್ಮಾಣದಲ್ಲಿ ಸುನಿಲ್ ಶೆಟ್ಟಿ ಕಲ್ಕೊಪ್ಪ ಹಾಗೂ ಯಶವಂತ್ ಬೆಳ್ತಂಗಡಿ (ನೀನಾಸಂ) ಅವರು ಸಲಹೆ ಮತ್ತು ಸಹಕಾರ ನೀಡಿದ್ದು, ಯುವ ಕಲಾವಿದರ ಈ ಪ್ರಯತ್ನಕ್ಕೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಒದಗಿಸಿದ್ದಾರೆ.
ಯುವಕರ ಸೃಜನಶೀಲತೆ, ಸಾಂಸ್ಕೃತಿಕ ಬದ್ಧತೆ ಮತ್ತು ತುಳುನಾಡಿನ ಪರಂಪರೆಯ ಮೇಲಿನ ಅಭಿಮಾನವನ್ನು ಪ್ರತಿಬಿಂಬಿಸುವ ‘ಶ್ರೀಗಣ’ ಕಿರುಚಿತ್ರವು ಕುಕ್ಕೆಶ್ರಿ ಕ್ರೀಯೇಷನ್ಸ್ ಎಂಬ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
