ಉಜಿರೆ: ಚತುರ್ವಿಧ ದಾನಪರಂಪರೆಯೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಮಾನವ ಕಲ್ಯಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡುತ್ತಿರುವ ಬಹುಮುಖಿ ಸೇವಾಕಾರ್ಯಗಳು ಆದರ್ಶ ಹಾಗೂ […]
Tag: ujire
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ಅಂಕ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಜಿ. ಮಾಧುರ್ಯಗೆ ಸನ್ಮಾನ
ಧರ್ಮಸ್ಥಳ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ 2ರಲ್ಲಿ ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಜಿ. ಮಾಧುರ್ಯ ಅವರು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮಾಧುರ್ಯ ಅವರು ಧರ್ಮಸ್ಥಳದ ಅನ್ನಪೂರ್ಣ ಛತ್ರದ ಪ್ರಬಂಧಕರಾದ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಮಧುರಾ ದಂಪತಿಯ ಪುತ್ರಿಯಾಗಿದ್ದಾರೆ. ಅವರ ಈ ಅಪೂರ್ವ ಸಾಧನೆಯನ್ನು ಅಭಿನಂದಿಸಿ, ಜೂನ್ 8ರಂದು ಧರ್ಮಸ್ಥಳ ಅನ್ನಪೂರ್ಣ ಛತ್ರದ ಹಿರಿಯ ಸಿಬ್ಬಂದಿಗಳಾದ ಭರತ್ರಾಜ್ ಜೈನ್, ಶ್ರೇಣಿಕ್ , ರಾಜು ಸಪಲ್ಯ ,ದೇವಿಪ್ರಸಾದ್, ಅಪ್ಪು ಬಿ, ಬಾಬು ಬಿ, ಉಮೇಶ ಯಂ, ಬಾಕಕೃಷ್ಣ ಶೆಟ್ಟಿ ಹಾಗೂ ಇತರ ಸಿಬ್ಬಂದಿಗಳು ಜಿ. ಮಾಧುರ್ಯ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಬ್ಬಂದಿಗಳು, ಮಾಧುರ್ಯ ಅವರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಮುಂದಿನ ವಿದ್ಯಾಭ್ಯಾಸದಲ್ಲಿಯೂ ಇದೇ ರೀತಿ ಉನ್ನತ ಸಾಧನೆ ಮಾಡಿ ಕುಟುಂಬ, ಶಾಲೆ ಹಾಗೂ ಸಮಾಜಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.
ಉಜಿರೆ: ವಿದ್ಯೇಂದ್ರ ತೀರ್ಥಶ್ರೀಪಾದರ ಧರ್ಮಸ್ಥಳ ಭೇಟಿ
ಉಜಿರೆ: ಮಂಗಳೂರಿನ ಕುಳಾಯಿ ಚಿತ್ರಾಪುರದಲ್ಲಿರುವ ವಿಜಯಧ್ವಜತೀರ್ಥ ಪೀಠದ ಪೂಜ್ಯ ವಿದ್ಯೇಂದ್ರತೀರ್ಥ ಶ್ರೀಪಾದರು ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರನ್ನು ಭವ್ಯ ಮೆರವಣಿಗೆಯ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಧರ್ಮಾಧಿಕಾರಿಗಳ ನಿವಾಸವಾದ ಬೀಡಿನಲ್ಲಿ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದ ಪರವಾಗಿ ಪೂಜ್ಯ ಶ್ರೀಪಾದರನ್ನು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಅನಂತರ ಪೂಜ್ಯ ವಿದ್ಯೇಂದ್ರತೀರ್ಥ ಶ್ರೀಪಾದರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ, ಅನ್ನಪೂರ್ಣ ಭೋಜನಾಲಯ ಹಾಗೂ ಸರದಿ ಸಾಲು ವ್ಯವಸ್ಥೆಯಾದ “ಶ್ರೀ ಸಾನ್ನಿಧ್ಯ”ವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉಜಿರೆ: ಪತ್ತನಾಜೆ ಉತ್ಸವ ಸಮಾಪ್ತಿ; ಧರ್ಮಸ್ಥಳದಲ್ಲಿ ವಿಶೇಷ ಪೂಜೆಗಳು
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪತ್ತನಾಜೆ ಪ್ರಯುಕ್ತ ಸೋಮವಾರ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ ನೆರವೇರಿತು. ಬಳಿಕ ಶ್ರೀ ದೇವರ ಉತ್ಸವಮೂರ್ತಿಯ ಬಲಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆ ಹಾಗೂ ಧ್ವಜಮರ ಅವರೋಹಣ ವಿಧಿವಿಧಾನಗಳೊಂದಿಗೆ ಉತ್ಸವಮೂರ್ತಿಯು ಗರ್ಭಗುಡಿಗೆ ಪ್ರವೇಶಿಸುವ ಮೂಲಕ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಸೇವೆಗಳು ಮತ್ತು ಉತ್ಸವಗಳು ಸಮಾಪ್ತಿಗೊಂಡವು. ಕಾರ್ತಿಕ ಮಾಸದ ದೀಪೋತ್ಸವದೊಂದಿಗೆ ಎಂದಿನಂತೆ ವಿಶೇಷ ಸೇವೆಗಳು ಹಾಗೂ ಉತ್ಸವಗಳು ಪುನರಾರಂಭಗೊಳ್ಳಲಿವೆ. ಸೋಮವಾರದ ಕಾರಣ ಕ್ಷೇತ್ರದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದ್ದು, ಊರು-ಪರಊರುಗಳಿಂದ ಆಗಮಿಸಿದ ಸಾವಿರಾರು ಭಕ್ತರು ಉತ್ಸವಗಳಲ್ಲಿ ಪಾಲ್ಗೊಂಡರು. ಯಕ್ಷಗಾನ ಮೇಳದ ತಿರುಗಾಟ ಸಮಾಪ್ತಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ವಾರ್ಷಿಕ ತಿರುಗಾಟವೂ ಇದೇ ಸಂದರ್ಭದಲ್ಲಿ ಸಮಾಪ್ತಿಗೊಂಡಿತು. ಈ ಅಂಗವಾಗಿ ಮೇಳದ ಶ್ರೀ ಮಹಾಗಣಪತಿ ದೇವರಿಗೆ ಧರ್ಮಸ್ಥಳದ ಮಂಜುಕೃಪಾದಲ್ಲಿ ಮಧ್ಯಾಹ್ನ ಗಣಯಾಗ ಹಾಗೂ ಮಹಾಪೂಜೆ ನೆರವೇರಿಸಲಾಯಿತು. ಸಂಜೆ ಮಹಾಪೂಜೆಯ ನಂತರ ಕ್ಷೇತ್ರದ ಸಕಲ ಗೌರವಗಳೊಂದಿಗೆ ಶ್ರೀ ಮಹಾಗಣಪತಿ ದೇವರನ್ನು ಭವ್ಯ ಶೋಭಾಯಾತ್ರೆಯ ಮೂಲಕ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಆನೆಗಳು, ಬಸವ, ಕೇರಳದ ಚೆಂಡೆ ವಾದ್ಯ ಬಳಗ, ಜಾಗಟೆ ಹಾಗೂ ವಿವಿಧ ವಾದ್ಯಮೇಳಗಳ ವೈಭವದ ನಡುವೆ ನಡೆದ ಮೆರವಣಿಗೆಯಲ್ಲಿ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡರು. ಬಳಿಕ ಶ್ರೀ ದೇವರ ದರ್ಶನ ಸೇವೆ ನೆರವೇರಿಸಿ, ಛತ್ರ ಗಣಪತಿ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಮೇಳದ ಯಜಮಾನ ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪಾರುಪತ್ಯೆದಾರ ಲಕ್ಷ್ಮೀನಾರಾಯಣ ರಾವ್, ಮೇಳದ ವ್ಯವಸ್ಥಾಪಕ ಗಿರೀಶ್ ಹೆಗ್ಡೆ, ಯಕ್ಷಗಾನ ಕಲಾವಿದರು, ಕ್ಷೇತ್ರದ ಸಿಬ್ಬಂದಿ ವರ್ಗ ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಮಂಗಳವಾರದಿಂದ ಮೂರು ದಿನಗಳ ಕಾಲ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಸೇವೆಯಾಟಗಳು ನಡೆಯಲಿದ್ದು, ಕಲಾವಿದರು ಸಂಪ್ರದಾಯಬದ್ಧವಾಗಿ ಗೆಜ್ಜೆ ಬಿಚ್ಚುವ ಮೂಲಕ ಪ್ರಸಕ್ತ ಸಾಲಿನ ವಾರ್ಷಿಕ ತಿರುಗಾಟಕ್ಕೆ ಮಂಗಳ ಹಾಡಲಿದ್ದಾರೆ.
