ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ನಮ್ಮ ಮೂಡುಬಿದಿರೆ, ನೇತಾಜಿ ಬ್ರಿಗೇಡ್, ಜೆಸಿಐ, ಮೂಡುಬಿದಿರೆ ಬಂಟರ ಮಹಿಳಾ ಸಂಘದ ಸದಸ್ಯರು ಭಾನುವಾರ ವಿದ್ಯಾಗಿರಿ-ಹನ್ಡೇಲು ಹಾಗೂ ವಿದ್ಯಾಗಿರಿ-ಪುತ್ತಿಗೆ ಪರಿಸರದ 5.5 ಕಿಮೀ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಸ್ವಚ್ಛ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಂಡರು.

ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ನ ಅಧ್ಯಕ್ಷ ಅಶೋಕ ಅಡ್ಯಂತಾಯ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸ್ವಚ್ಛತೆ ಎನ್ನುವುದು ಆರೋಗ್ಯಕರ ಸಮಾಜದ ಅಡಿಪಾಯ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ಇದೇ ಉದ್ದೇಶವನ್ನು ಮನಗಂಡು ಮೂಡುಬಿದಿರೆಯಲ್ಲಿ ವಿವಿಧ ಸಂಘ–ಸಂಸ್ಥೆಗಳು ಕೈಜೋಡಿಸಿ “ಸ್ವಚ್ಛ ಸಂಕಲ್ಪ” ಎಂಬ ಮಹತ್ವದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿವೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ನಿಂದ ಕಳೆದ 12 ವರ್ಷಗಳಿಂದ ಅಳಿವೆ ಪ್ರದೇಶದಲ್ಲಿ ನಿರಂತರವಾಗಿ ಸ್ವಚ್ಛತಾ ಅಭಿಯಾನ ನಡೆಸುತ್ತ ಬರಲಾಗಿದೆ. ನಂದಿನಿ ಹಾಗೂ ಫಾಲ್ಗುಣಿ ನದಿಗಳು ಈ ಭಾಗದಲ್ಲಿ ಹರಿಯುತ್ತಿದ್ದು, ಅವುಗಳಿಗೆ ಸಂಪರ್ಕ ಹೊಂದಿರುವ ಚರಂಡಿಗಳ ಮೂಲಕ ತ್ಯಾಜ್ಯಗಳು ನದಿಗೆ ಸೇರುವ ಅಪಾಯವಿದೆ. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಬದಿಗಳು ಹಾಗೂ ಚರಂಡಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮತ್ತು ಇತರೆ ಕಸಕಡ್ಡಿಗಳು ಸುಲಭವಾಗಿ ಸಮುದ್ರ ಸೇರುವ ಸಾಧ್ಯತೆ ಇರುವುದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪಶ್ಚಿಮಘಟ್ಟ ಹಾಗೂ ಸಮುದ್ರ ತೀರ ಪ್ರದೇಶಗಳ ಮಧ್ಯೆ ಇರುವ ಈ ಭಾಗ ಅತೀ ಸೂಕ್ಷ್ಮ ಪರಿಸರ ವಲಯವಾಗಿದ್ದು, ಪರಿಸರವನ್ನು ಕಾಪಾಡುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ಸಮಾನವಾಗಿ ಸ್ವೀಕರಿಸಬೇಕು. ನಮ್ಮ ಊರು–ನಮ್ಮ ಜವಾಬ್ದಾರಿ ಎಂಬ ಮನೋಭಾವದೊಂದಿಗೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವೆಂದು ಹೇಳಿದರು.
ಅಭಿಯಾನದಲ್ಲಿ ಆಳ್ವಾಸ್ನ 600ಕ್ಕೂ ಅಧಿಕ ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದರು. ಸ್ವಚ್ಛತಾ ಕಾರ್ಯದ ವೇಳೆ 700ಕ್ಕೂ ಅಧಿಕ ಚೀಲಗಳಷ್ಟು ಕಸಕಡ್ಡಿಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.
ರಾಮಕೃಷ್ಣ ಮಿಷನ್ನ ರಂಜನ್ ಬೆಳ್ಳರ್ಪಾಡಿ, ನಮ್ಮ ಮೂಡುಬಿದಿರೆಯ ಅಕ್ಷಯ ಜೈನ್, ನೇತಾಜಿ ಬ್ರಿಗೇಡ್ ರಾಹುಲ್, ಬಂಟರ ಮಹಿಳಾ ಘಟಕದ ಶೋಭಾ ಹೆಗ್ಡೆ, ಪರ್ಯಾವರಣ ಗತಿವಿಧಿಯ ವೆಂಕಟೇಶ್, ಕೇಶವ, ಚಂದ್ರಹಾಸ, ಮಂಜುನಾಥ ಶೆಟ್ಟಿ ಹಾಗೂ ಪ್ರಮುಖರಾದ ಯಾಸಿರ್, ಸಂಪತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
