ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 10 ಲಕ್ಷ ವಂಚನೆ: ಮುಂಬಯಿಲ್ಲಿ ಮಹಿಳೆಯ ಬಂಧನ

ಮುಂಬಯಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಲಕ್ಷಾಂತರ ರೂಪಾಯಿ ಲಾಭ ಮಾಡಿ ಕೊಡುವುದಾಗಿ ತಿಳಿಸಿ ವಂಚಿಸಿ ಚೆಕ್ ಬೌನ್ಸ್ ಮತ್ತು ಹಣ ವಂಚನೆಯ ಆರೋಪದ ಮೇಲೆ ಉಡುಪಿ ಕೊಲಳಗಿರಿ ಕುಕ್ಕಿಕಟ್ಟೆ ಮೂಲತಃ ದೀಪಿಕಾ ಮನೋಜ್ ಶೆಟ್ಟಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದು ಇದೀಗ ವಂಚನೆಗಾಗಿ ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ.20 ರಷ್ಟು ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಹಾಗೂ ಅವರ ಸಹೋದರನಿಗೆ ಒಟ್ಟು 10 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮುಂಬಯಿ ಕಾಂದಿವಲಿ ಪಶ್ಚಿಮದಲ್ಲಿ ನಡೆದಿದೆ. ಘಟನೆಯ ಹಿನ್ನೆಲೆಯಂತೆ ಸುಮಾರು ಅರ್ವತ್ತು ವಯಸ್ಸಿನ ರಜನಿ ದಯಾನಂದ್ ಶೆಟ್ಟಿ ನೀಡಿದ ದೂರಿನ ಮೇರೆಗೆ ಕಾಂದಿವಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ದೂರುದಾರೆ ರಜನಿ ಶೆಟ್ಟಿ ಅವರ ಸೋದರಸಂಬಂಧಿ ಹರೀಶ್ ಶೆಟ್ಟಿ ಎಂಬುವರು ನಿರ್ಮಲ್ ಬ್ಯಾಂಗ್ ಎಂಬ ಬ್ರೋಕಿಂಗ್ ಏಜೆನ್ಸಿಯಲ್ಲಿ ಖಾತೆ ಹೊಂದಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಉಡುಪಿ ಕೊಲಳಗಿರಿ ಕುಕ್ಕಿಕಟ್ಟೆ ಮೂಲತಃ ದೀಪಿಕಾ ಮನೋಜ್ ಶೆಟ್ಟಿ ಎಂಬಾಕೆಯ ಪರಿಚಯ ರಜನಿ ಅವರಿಗೆ ಆಗಿದ್ದು, ಸೆಪ್ಟೆಂಬರ್ 2024ರಲ್ಲಿ ಕಮಲಾ ವಿಹಾರ್ ಸ್ಪೋರ್ಟ್ಸ್ ಕ್ಲಬ್‍ನಲ್ಲಿ ಭೇಟಿಯಾದಾಗ, ದೀಪಿಕಾ ಶೆಟ್ಟಿ ತನಗಿರುವ ಶೇರು ಮಾರುಕಟ್ಟೆಯ ಬಗ್ಗೆ ಪ್ರಸ್ತಾಪಿಸಿದ್ದಳು ಎನ್ನಲಾಗಿದೆ. 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಮೂರು ತಿಂಗಳ ನಂತರ ಪ್ರತಿ ತಿಂಗಳು 20% ರಷ್ಟು ಅಂದರೆ 60 ಸಾವಿರ ರೂಪಾಯಿ ಲಾಭ ನೀಡುವುದಾಗಿ ಆಮಿಷ ಒಡ್ಡಿದ್ದು, ದೀಪಿಕಾಳ ಮಾತನ್ನು ನಂಬಿದ ರಜನಿ ಶೆಟ್ಟಿ ಅವರು ಅಕ್ಟೋಬರ್ 2024 ರಿಂದ ಡಿಸೆಂಬರ್ 2024ರ ಅವಧಿಯಲ್ಲಿ ತಮ್ಮ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ದೀಪಿಕಾಳ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ಹಂತ-ಹಂತವಾಗಿ ಒಟ್ಟು 9,00,000 ರೂಪಾಯಿಗಳನ್ನು ಆರ್‍ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ. ಇದೇ ವೇಳೆ ಅವರ ಸಹೋದರ ಹರೀಶ್ ಶೆಟ್ಟಿ ಕೂಡ ತನ್ನ ಭಾರತ್ ಬ್ಯಾಂಕ್ ಖಾತೆಯಿಂದ 2,00,000 ರೂಪಾಯಿಗಳನ್ನು ದೀಪಿಕಾಳ ಖಾತೆಗೆ ಜಮೆ ಮಾಡಿದ್ದಾರೆ.

ಚೆಕ್ ಬೌನ್ಸ್ ಮತ್ತು ವಂಚನೆ:
ಹಣ ಪಡೆದ ನಂತರ ಒಪ್ಪಂದದಂತೆ ದೀಪಿಕಾ ಲಾಭಾಂಶ ಅಥವಾ ಅಸಲು ಹಣವನ್ನು ಮರುಪಾವತಿಸಿಲ್ಲ. ರಜನಿ ಅವರು ಹಣಕ್ಕಾಗಿ ಒತ್ತಾಯಿಸಿದಾಗ, ದೀಪಿಕಾ ತನ್ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಖಾತೆಗಳ ಒಟ್ಟು 8,58,600 ರೂಪಾಯಿ ಮೌಲ್ಯದ ಚೆಕ್‍ಗಳನ್ನು ನೀಡಿದ್ದು, ಆ ಚೆಕ್‍ಗಳು ಬ್ಯಾಂಕ್‍ನಲ್ಲಿ ಬೌನ್ಸ್ ಆಗಿವೆ. ತದನಂತರ ದೀಪಿಕಾ ಹಣ ನೀಡದೆ ಸತಾಯಿಸಲು ಹಾಗೂ ತಪ್ಪಿಸಿಕೊಳ್ಳಲು ಆರಂಭಿಸಿದ್ದಳು ಎನ್ನಲಾಗಿದೆ.

ದೂರುದಾರರ ಹೇಳಿಕೆಯಂತೆ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಭಾರಿ ಲಾಭ ಗಳಿಸಿಕೊಡುವುದಾಗಿ ನಂಬಿಸಿ ದೀಪಿಕಾ ಶೆಟ್ಟಿ ನನ್ನಿಂದ 9 ಲಕ್ಷ ಹಾಗೂ ನನ್ನ ಸಹೋದರನಿಂದ 1 ಲಕ್ಷ ಸೇರಿ ಒಟ್ಟು 10 ಲಕ್ಷ ರೂ. ಪಡೆದು ವಂಚಿಸಿದ್ದಾಳೆ. ತಮಗೆ ವಂಚನೆಯಾಗಿರುವುದು ಖಚಿತವಾಗುತ್ತಿದ್ದಂತೆ ರಜನಿ ಶೆಟ್ಟಿ ಆಕೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂದಿವಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕಾಂದಿವಲಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ನಿರೀಕ್ಷಕ ಸೋಹನ್ ಸುರೇಶ್ ರಾವ್ ಕದಂ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಮುಖ್ಯ ಪೊಲೀಸ್ ನಿರೀಕ್ಷಕ ಕರಣ್ ಗುಣಾಜಿ ಸೋನಿ ಮಾರ್ಗದರ್ಶನದಲ್ಲಿ ಕಾನೂನು ಕ್ರಮ ಜರುಗಿಸಿ ತನಿಖೆಯನ್ನು ಮುಂದುವರಿಸಿದ್ದು ಆರೋಪಿ ದೀಪಿಕಾ ಶೆಟ್ಟಿ ಹಣವನ್ನು ಮರುಪಾವತಿಸಲು ಅಸಾಧ್ಯವಾದ ಕಾರಣ ವಂಚನೆ ಆರೋಪದಡಿ ಪೊಲೀಸ್ ಕಸ್ಟಡಿಯಿಂದ ಮುಂಬಯಿ ಸೆಂಟ್ರಲ್‍ನ ನಾಗ್ಪಾಡಾ ಅಲ್ಲಿರುವ ಬೈಕುಲ್ಲಾ ಮಹಿಳಾ ಕಾರಾಗೃಹ (ಜಿಲ್ಲಾ ಜೈಲು) ಸೇರಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *