ಕಾರ್ಕಳ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭೀಷೇಕ ಮಹೋತ್ಸವದ ಪ್ರಯುಕ್ತ ಸಮಾಲೋಚನಾ ಸಭೆ

ಕಾರ್ಕಳ: ಕಾರ್ಕಳದ ಇತಿಹಾಸ ಪ್ರಸಿದ್ಧ ಬಾಹುಬಲಿ ಮಹಾಮಸ್ತಕಾಭೀಷೇಕ ಮಹೋತ್ಸವದ ಅಂಗವಾಗಿ ಜೈನ ಸಮುದಾಯದ ವತಿಯಿಂದ ಪೂರ್ವಭಾವಿ ಸಮಾಲೋಚನಾ ಸಭೆಯು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ ಎನ್ ರಾಜೇಂದ್ರ ಕುಮಾ‌ರ್ ನೇತೃತ್ವದಲ್ಲಿ ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ ಜ. 26 ರಂದು ಸೋಮವಾರ ಸಂಜೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜೇಂದ್ರ ಕುಮಾರ್, ಬಾಹುಬಲಿ ಮಹಾಮಸ್ತಕಾಭಿಷೇಕ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಕಾರ್ಕಳದ ಪ್ರಮುಖ ರಸ್ತೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಸುಮಾರು 70 ಕೋ.ರೂ ಯೋಜನೆ ಸಿದ್ಧಪಡಿಸಲಾಗಿದ್ದು, ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಇದಲ್ಲದೇ ಜೈನ ಮಠದ ಯಾತ್ರಿ ನಿವಾಸದ ದುರಸ್ತಿಗೆ 40 ಲಕ್ಷ ಅನುದಾನದ ಅಗತ್ಯವಿದೆ ಎಂದರು. ಮಸ್ತಕಾಭಿಷೇಕ ಮಹೋತ್ಸವದ ಯಶಸ್ಸಿಗೆ ಈಗಾಗಲೇ ಸಾಕಷ್ಟು ಸಮಿತಿಗಳನ್ನು ರಚಿಸಲಾಗಿದೆ. ಆದರೆ ಮಹಿಳಾ ಸ್ವಯಂಸೇವಕರ ಸಮಿತಿ ರಚನೆಯಾಗದ ಹಿನ್ನಲೆಯಲ್ಲಿ ಮಹಿಳೆಯರ ಸ್ವಯಂಸೇವಕರ ಸಮಿತಿ ರಚಿಸುವಂತೆ ಸೂಚಿಸಿದರು.

ಮುಂಬರುವ ಮಹಾಮಸ್ತಕಾಭಿಷೇಕ ಮಹೋತ್ಸವ ಬಹಳ ಅದ್ದೂರಿಯಾಗಿ ನಡೆಯಬೇಕು, ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಹಾಗೂ ಇದಲ್ಲದೇ ಸರ್ಕಾರದಿಂದ ಅನುದಾನ ಒದಗಿಸುವ ಸಲುವಾಗಿ ಪ್ರಯತ್ನಿಸುವುದಾಗಿ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಭರವಸೆ ನೀಡಿದರು.
ಸಭೆಯಲ್ಲಿ ಮಹಾ ಮಸ್ತಕಾಭಿಷೇಕ ಮಹೋತ್ಸವದ ವಿವಿಧ ಸಮಿತಿಗಳ ಪದಾಧಿಕಾರಿಗಳು ತಮ್ಮ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಮಸ್ತಕಾಭಿಷೇಕ ಕಾರ್ಯಕ್ರಮಗಳಲ್ಲಿ ಸಮಯಪಾಲನೆಗೆ ಅತ್ಯಂತ ಮಹತ್ವ ನೀಡಬೇಕು. ಎಲ್ಲಾ ಕಾರ್ಯಕ್ರಮಗಳು ನಿಗದಿತ ಸಮಯಕ್ಕೆ ಆರಂಭವಾಗಿ ನಿಗದಿತ ಸಮಯಕ್ಕೆ ಮುಕ್ತಾಯವಾಗಬೇಕು, ಇದಕ್ಕೆ ಶಿಸ್ತುಪಾಲನಾ ಸಮಿತಿ ರಚಿಸಬೇಕು ಎಂಬ ಅಭಿಪ್ರಾಯ ಮಂಡನೆಯಾಯಿತು. ವಾಹನಗಳ ಪಾರ್ಕಿಂಗ್ ಗೆ ಹೆಚ್ಚುವರಿ ಸ್ಥಳಾವಕಾಶ ಒದಗಿಸುವಂತೆ ಮನವಿ ಮಾಡಲಾಯಿತು. ಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಇತರೇ ಸಮುದಾಯಗಳ ಸ್ವಾಮೀಜಿ ಹಾಗೂ ಆಯಾ ಸಮಾಜದ ಧಾರ್ಮಿಕ ಮುಖಂಡರಿಗೆ ಆಹ್ವಾನಿಸಬೇಕು, ಇದರಿಂದ ನಮ್ಮ ಧಾರ್ಮಿಕ ಪರಂಪರೆಯ ಮಹತ್ವ ತಿಳಿಸಿದಂತಾಗುತ್ತದೆ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಇನ್ನುಳಿದಂತೆ ರಾಜ್ಯಮಟ್ಟದ ಜಿನ ಭಜನಾ ಕಾರ್ಯಕ್ರಮ ಆಯೋಜಿಸುವಂತೆ ಅಭಿಪ್ರಾಯ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಅನಂತರಾಜ್ ಪೂವಣಿ, ಪುಷ್ಪರಾಜ ಜೈನ್, ಸಂಪತ್ ಸಾಮ್ರಾಜ್ಯ ಶಿರ್ತಾಡಿ,ರತ್ನಾಕರ ರಾಜ್ ಅರಸು, ಜೀವಂಧರ್ ಬಳ್ಳಾಲ್, ಸೂರಜ್ ಕುಮಾರ್, ಶಿವಪ್ರಸಾದ್ ಅಜಿಲ, ಬ್ರಹ್ಮದೇವ ಕಲಶ, ಅಜಿತ್ ಕೊಕ್ರಾಡಿ, ಮೋಹನ್ ಪಡಿವಾಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *