ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ: ಅಖಿಲ ಭಾರತ ಬಿಲ್ಲವರ ಯೂನಿಯನ್ ಘೋಷಣೆ

ಮಂಗಳೂರು: ವಿಶ್ವಪ್ರಸಿದ್ಧ ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಗೆ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.) ಅಧಿಕೃತವಾಗಿ ಘೋಷಿಸಿದೆ ಎಂದು ನೂತನ ಕಾರ್ಯದರ್ಶಿ ರವಿಶಂಕರ್ ಮಿಜಾರ್ ತಿಳಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ‌ಬಗ್ಗೆ ಮಾಹಿತಿ ನೀಡಿದ ಅವರು, ಫೆಬ್ರವರಿ 16, 2026 ರಂದು ನಾರಾಯಣ ಗುರು ಕಾಲೇಜಿನ ಸಭಾಂಗಣದಲ್ಲಿ ನಡೆದ ಯೂನಿಯನ್‌ನ ವಾರ್ಷಿಕ ಪ್ರತಿನಿಧಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಕಳೆದ ವರ್ಷ ಜೂನ್ 20, 2025 ರಂದು ನಡೆದಿದ್ದ ಸಮಿತಿಯ ಸಭೆಯು ಅಸಂವಿಧಾನಿಕ ಮತ್ತು ಅನಧಿಕೃತ ಎಂದು ಯೂನಿಯನ್ ಸ್ಪಷ್ಟಪಡಿಸಿದೆ. ಕ್ಷೇತ್ರದ ಅಧ್ಯಕ್ಷರ ಅನುಮತಿ ಇಲ್ಲದೆ ಹಾಗೂ ಬಹುಮತದ ಕೊರತೆಯೊಂದಿಗೆ ನಡೆದಿದ್ದ ಆ ಸಭೆಯಲ್ಲಿ ಏಕಪಕ್ಷೀಯವಾಗಿ ಸಮಿತಿಯನ್ನು ಘೋಷಿಸಲಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹೂಡಲಾಗಿದ್ದ ಕಾನೂನು ಹೋರಾಟದಲ್ಲಿ ಜಿಲ್ಲಾ ನ್ಯಾಯಾಲಯವು ಯೂನಿಯನ್ ಪರವಾಗಿ ತೀರ್ಪು ನೀಡಿದ್ದು, ಹಿಂದಿನ ಅನಧಿಕೃತ ಸಮಿತಿಯನ್ನು ರದ್ದುಗೊಳಿಸಿ ನ್ಯಾಯ ಒದಗಿಸಿದೆ.

50 ಸದಸ್ಯರ ಎಕ್ಸಿಕ್ಯೂಟಿವ್ ಸಮಿತಿಯನ್ನು ರಚಿಸಲಾಗಿದ್ದು, ಅದರಲ್ಲಿ ಪ್ರಮುಖವಾಗಿ ಈ ಕೆಳಗಿನವರನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರು: ಎಚ್.ಎಸ್. ಸಾಯಿರಾಮ್, ಉಪಾಧ್ಯಕ್ಷರು: ಊರ್ಮಿಳಾ ರಮೇಶ್ ಕುಮಾರ್,ಕಾರ್ಯದರ್ಶಿ: ರವಿಶಂಕರ್ ಮಿಜಾರ್, ಖಜಾಂಚಿ: ಶೇಖರ್ ಪೂಜಾರಿ, ಸದಸ್ಯರು: ಜಗದೀಶ್ ಸುವರ್ಣ, ಕೆ.ಟಿ. ಸುವರ್ಣ, ಎಚ್. ರತೀಂದ್ರನಾಥ್, ಸದಾನಂದ ಪೂಜಾರಿ ಮತ್ತು ಶರತ್ ಸುವರ್ಣ ಬಜ್ಪೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬಿಲ್ಲವ ಸಮಾಜದ ಗುರು-ಹಿರಿಯರ ಆಶಯದಂತೆ ಹಾಗೂ ಸಂಸ್ಥೆಯ ಬೈಲಾ ಪ್ರಕಾರವೇ ಈ ನೂತನ ಸಮಿತಿಯನ್ನು ರಚಿಸಲಾಗಿದ್ದು, 2026-27ನೇ ಸಾಲಿನಲ್ಲಿ ಕ್ಷೇತ್ರದ ಆಡಳಿತವನ್ನು ಈ ಸಮಿತಿಯು ಅಧಿಕೃತವಾಗಿ ನಿರ್ವಹಿಸಲಿದೆ ಎಂದರು.

Leave a Reply

Your email address will not be published. Required fields are marked *