
ಪುಷ್ಪಲತಾ ಟಿ.ಜಿ
ಸಾಗರ
(ಶಿಕ್ಷಕಿ
ಪರ್ಲ್ ಪಬ್ಲಿಕ್ ಶಾಲೆ. ಹರಪನಹಳ್ಳಿ ವಿಜಯನಗರ)
ಜೂನ್ ಮಾಸ ಬಂತೆಂದರೆ ಮಳೆಯ ಜೊತೆಗೆ ಮಕ್ಕಳ ಕಲರವ . ಶಾಲೆಯ ಮೆಟ್ಟಿಲು ಮೊದಲಬಾರಿಗೆ ಹತ್ತುವ ಮಕ್ಕಳ ಭಯ, ದುಗುಡ . ಗೂಡಲ್ಲಿ ಬೆಚ್ಚಗೆ ಸಾಕಿದ್ದ ಮಕ್ಕಳನ್ನು ಬಿಟ್ಟು ಹೋಗುವ ಪೋಷಕರ ಆತಂಕ ,ಅಳುತ್ತಲೇ ಬಸ್ ಹತ್ತುವ ಪುಟಾಣಿ ಮಕ್ಕಳ ಆರ್ಭಟ ಮಳೆಯಷ್ಟೇ ಜೋರಾಗಿರುತ್ತದೆ.ಬೇಸಿಗೆ ರಜೆಯನ್ನು ಮನ ಬಂದಂತೆ ಆನಂದಿಸಿದ ಮಕ್ಕಳಿಗೆ ಶಾಲೆ ದೊಡ್ಡ ಕಿರಿಕಿರಿ ಎನ್ನಿಸಬಹುದು. ಸ್ವಚ್ಛಂದವಾಗಿ ಹಾರುತ್ತಿದ್ದ ಪಕ್ಷಿಯನ್ನು ಪಂಜರದಲ್ಲಿ ಹಿಡಿದಿಟ್ಟ ಅನುಭವವಾಗಬಹುದು. ಹೀಗೆ ನೂರಾರು ಗೊಂದಲದಲ್ಲಿ ಅನಿವಾರ್ಯವಾಗಿ ಶಾಲೆಗೆ ಹೆಜ್ಜೆ ಇಟ್ಟ ಮಕ್ಕಳನ್ನು ಒಮ್ಮಿಂದೊಮ್ಮೆಗೆ ಪಠ್ಯಕ್ರಮಕ್ಕೆ ತಳ್ಳಿದರೆ ಉಸಿರುಗಟ್ಟಿ ಒದ್ದಾಡಬಹುದು. ದೈಹಿಕವಾಗಿ ಹಾಜರಿರುವ ಮಕ್ಕಳನ್ನು ಮಾನಸಿಕವಾಗಿ ಶಿಕ್ಷಣದ ಪರಿಸರಕ್ಕೆ ಕರೆತರುವುದು ಗುರುತರವಾದ ಜವಾಬ್ದಾರಿ.
ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಶಿಕ್ಷಣ ಹಾಗೂ ಸಂಸ್ಕಾರ ಎರಡಕ್ಕೂ ಅನ್ವಯಿಸುತ್ತದೆ. ಕೇವಲ ಅಕ್ಷರ ಕಲಿಸುವುದಷ್ಟೇ ಶಿಕ್ಷಣವಲ್ಲ.ಮಕ್ಕಳ ಅಗತ್ಯತೆ ಪೂರೈಸುವುದಷ್ಟೇ ಪಾಲಕತ್ವವಲ್ಲ.
ಮಕ್ಕಳನ್ನು ಆಲಿಸಬೇಕು.ಅವರ ಪ್ರಪಂಚ ಸ್ಪರ್ಶಿಸಬೇಕು ಆಗ ಮಾತ್ರ ಅವರ ಆಗು ಹೋಗುಗಳ ನೈಜ ಚಿತ್ರಣ ಸಿಗುತ್ತದೆ.ಇಂದಿನ ಓಡುವ ಯುಗದಲ್ಲಿ ಮಕ್ಕಳನ್ನು ಸಾಕಿ ಬೆಳೆಸಲೆ ಸಮಯವಿಲ್ಲ ಹೀಗಿರುವಾಗ ಅವರನ್ನು ಆಲಿಸುವ ಮಾತೆಲ್ಲಿ? ಆದರೆ ನೆನಪಿಡಿ ಪೋಷಕರೇ ಭರವಸೆಯ ಪಾಲಕತ್ವ ಪ್ರತಿ ಮಗುವಿಗೆ ಸಿಗಬೇಕು.ಅವರ ಜಗತ್ತಲ್ಲಿ ನೀವು ಆಗಾಗ ಕಾಣುತ್ತಿರಬೇಕು. ಸೌಕರ್ಯ ಒದಗಿಸುವುದು ಪಾಲಕತ್ವವಲ್ಲ.ಪ್ರತಿಷ್ಠೆಯ ಶಾಲೆಗೆ ಸೇರಿಸಿ ಲಕ್ಷಾಂತರ ರೂಪಾಯಿ ಸುರಿದರೆ ಜವಾಬ್ದಾರಿ ಮುಗಿಯುವುದಿಲ್ಲ.
ಮಗುವನ್ನು ಬೆಳೆಸುವುದು ಎಂಬ ಪದ ಬಳಕೆ ಇದೆಯೇ ವಿನಃ ಮಗು ಸಾಕುವುದು ಎಂದಿಲ್ಲ. ಪುಟ್ಟ ಮಗುವಿನ ಪ್ರಪಂಚ ನಿಮ್ಮಷ್ಟು ದೊಡ್ಡದಾಗಿರುವುದಿಲ್ಲ.ವಿಶ್ಲೇಷಿಸುವ, ವಿಮರ್ಶಿಸುವ ನಿರ್ಧಾರ ಕೈಗೊಳ್ಳುವ ಶಕ್ತಿ ಅದಕ್ಕೆ ಇರುವುದಿಲ್ಲ.ಪ್ರತಿ ಕ್ಷಣ ಮಗು ನಿಮ್ಮನ್ನು ಅನುಕರಿಸಲು ಯತ್ನಿಸುತ್ತದೆ. ಸುತ್ತಲಿನ ವಾತಾವರಣವನ್ನೇ ಅದು ಅಂತರ್ಗತ ಮಾಡಿಕೊಳ್ಳುತ್ತದೆ. ಇದು ಕೇವಲ ಆಗ ತಾನೆ ಶಾಲೆಗೆ ಹೆಜ್ಜೆ ಇಡುವ ಪುಟ್ಟ ಕಂದಮ್ಮನ ಕಥೆಯಲ್ಲ. ಹದಿ ಹರೆಯದ ಹೊಸ್ತಿಲಲ್ಲಿ ನಿಂತು ಹತ್ತರ ಪರೀಕ್ಷೆ ಎದುರಿಸುವ ನಿಮ್ಮ ಮಗುವಿನ ಮನಸ್ಥಿತಿಯೂ ಇದಕ್ಕೆ ಹೊರತಲ್ಲ.ಮಗುವಿಗೆ ವಿನಾ ಕಾರಣ ಮೊಬೈಲ್ ನೀಡುವುದು ಕಡಿಮೆ ಮಾಡಿ.ಮಗುವಿಗಾಗಿ ನಿಮ್ಮ ಸಮಯ ಮೀಸಲಿಡಿ.ಮಗುವಿನೊಂದಿಗೆ ಮುಕ್ತವಾಗಿ ಮಾತಾಡಿ.ಕುಟುಂಬದ ಆಗು ಹೋಗುಗಳನ್ನು ವೃತ್ತಿ ಜೀವನದ ಚಿಕ್ಕ ಪುಟ್ಟ ಘಟನೆಗಳನ್ನು ಚರ್ಚಿಸಿ ಆಗ ಮಗುವಿಗೆ ತನ್ನ ಆಗು ಹೋಗು ಹೇಳಿಕೊಳ್ಳುವ ಮನಸ್ತಿತಿ ತಾನಾಗಿ ಬೆಳೆಯುತ್ತದೆ.ಶಾಲೆಯ ಸೇರಿಸಿದ ನಂತರ ಪಾಲಕರ ಜವಾಬ್ದಾರಿ ಮುಗಿಯುವುದಿಲ್ಲ ಬದಲಾಗುತ್ತದೆ.
ಬಣ್ಣ ಬಣ್ಣದ ಛತ್ರಿ ಹಿಡಿದು ಬರುವ ಮಕ್ಕಳ ಮನ ಆ ದಿನಗಳಲ್ಲಿ ಬಣ್ಣದಿಂದಲೇ ತುಂಬಿರುತ್ತದೆ.ಬಣ್ಣದ ಬದುಕಿಗೆ ಬೆಳಕನ್ನು ನೀಡಲು ಶಿಕ್ಷಣ ದೀಪವಾಗಬೇಕು.ಮಗು ತನ್ನ ಅನುಭವ ಹಂಚಿಕೊಳ್ಳುತ್ತಲೇ ಪಾಠವನ್ನು ಅರ್ಥಮಾಡಿಕೊಳ್ಳುವ ವಿದ್ಯಾರ್ಥಿ ಕೇಂದ್ರಿತ ಬೋಧನೆ ನಿಜಕ್ಕೂ ಅವಶ್ಯ.ಯಾವಾಗಲೂ ಶಿಕ್ಷಕರಾದ ನಾವು ನಮ್ಮ ಅನುಭವಗಳನ್ನು ನಮ್ಮದೇ ಕಥೆಯನ್ನು ಮಕ್ಕಳ ಮೇಲೆ ಹೇರುವ ಬದಲಿಗೆ ಮಕ್ಕಳ ಯೋಚನೆಗೆ ರೆಕ್ಕೆ ಕಟ್ಟಿ ಹಾರಲು ಬಿಡಬೇಕು.ಕಟ್ಟಿ ಕೊಟ್ಟ ಬುತ್ತಿ ಹೆಚ್ಚು ಕಾಲ ಬರಲಾರದು .ಬುತ್ತಿ ಕಟ್ಟುವ ಕ್ರಿಯೆ ಅವರಿಂದಲೇ ಆರಂಭವಾಗಿ ಅನುಭವ ಸಹಿತ ( ಆಕ್ಟಿವಿಟಿ ಬೇಸ್ಡ್ ) ಕಲಿಕೆ ಇಂದಿನ ಶಿಕ್ಷಣದ ಆದ್ಯತೆ.ಇಂದಿನ ಜೆನ್ ಜಿ ಯುಗಕ್ಕೆ ಕಂಠಪಾಠದ ಅವಶ್ಯಕತೆಯಿಲ್ಲ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ( ಕೃತಕ ಬುದ್ಧಿಮತ್ತೆ) ಇಂದು ಅಂತಹ ಎಲ್ಲಾ ಕೆಲಸ ಮಾಡಬಲ್ಲದು. ಇಂದಿನ ಜಗತ್ತಿಗೆ ಬೇಕಾಗಿರುವುದು ಜ್ಞಾನದಿಂದಿಗಿನ ಕೌಶಲ್ಯ.
ಪ್ರತಿ ಮಗುವನ್ನು ಕೌಶಲ್ಯಯುಕ್ತ ಸಂಪತ್ತನ್ನಾಗಿ ಬದಲಿಸುವುದು ಶಿಕ್ಷಕರಾದ ನಮ್ಮ ಕೆಲಸ.ನಮ್ಮ ಪಾಠವನ್ನು ಮಗುವಿನ ಮೇಲೆ ಹೇರಿ ಕೆಲಸ ಮುಗಿಯಿತೆಂದು ತೃಪ್ತಿ ಪಡಲು ಮಗು ಖಾಲಿ ಹಾಳೆಯಾಗಿ ಬಂದಿರುವುದಿಲ್ಲ.ಅದರಲ್ಲಿ ನೂರಾರು ಪ್ರಶ್ನೆಗಳಿರಬಹುದು, ಯಾವುದೋ ಅನುಭವ ಸಂತಸ ನೀಡಿರಬಹುದು. ಸಿಟ್ಟಿರಬಹುದು ಕಾತುರತೆ,ಪ್ರೀತಿ,ದುಃಖ,ಗೊಂದಲ ಹೀಗೆ ಹಲವಾರು ಭಾವಗಳ ಮಿಶ್ರಣವಿರಬಹುದು.ಹೀಗಿದ್ದ ಮಗು ಹೇಳಿದ್ದನ್ನೆಲ್ಲ ತನ್ನ ಜೋಳಿಗೆಯಲ್ಲಿ ಹೇಗೆ ತುಂಬಿಕೊಳ್ಳಲು ಸಾಧ್ಯ.ಅದರ ಜೋಳಿಗೆ ಖಾಲಿ ಇದ್ದಷ್ಟೂ ತುಂಬಿಕೊಳ್ಳಲು ಸಾಧ್ಯವಿಲ್ಲ.ಸಿಕ್ಕಷ್ಟು ಆಯ್ದು ತುಂಬಿಕೊಂಡೀತು. ಇದು ಕೇವಲ ಪುಟ್ಟ ಹೆಜ್ಜೆಯಿಡುವ ಮಗುವಿನ ಕಥೆಯಲ್ಲ.ಹದಿಹರೆಯಕ್ಕೆ ಕಾಲಿಟ್ಟ ಮಗುವಿನ ಮನಸ್ಥಿತಿಯೂ ಹೌದು.ಒಂದಿಷ್ಟು ತಲ್ಲಣ ಗೊಂದಲದ ನಡುವೆ ಹತ್ತರ ಮಹತ್ವದ ಘಟ್ಟ ಹತ್ತಲು ನಿಂತ ಮಗುವಿನ ಸ್ಥಿತಿಯೂ ಹೌದು. ಚಿಗುರಿನ ಹೊಸತನದ ಜೊತೆಗೆ ಸವಾಲಾದ ಪರೀಕ್ಷೆಯನ್ನು ಎದುರಿಸುವ ಹಂತದ ಮಗುವಿಗೆ ನೈತಿಕ ಬೆಂಬಲದ ಅಗತ್ಯವಿರುತ್ತದೆ.ಜೀವನದಲ್ಲಿ ಸಹಜ ಎನ್ನಿಸುವ ಆಕರ್ಷಣೆ ಆಗ ತಾನೆ ಹರೆಯಕ್ಕೆ ಕಾಲಿಟ್ಟ ಮಗುವಿನ ಅನುಭವಕ್ಕೆ ಬಂದಾಗ ಅಪರಾಧ ಎನ್ನಿಸಬಹುದು. ಅರಿವಿಲ್ಲದೆ ಮೂಡಿದ ಭಾವ ಮುಚ್ಚಿಟ್ಟ ಗುಪ್ತಗಾಮಿನಿಯಾಗಿ ಓದಿನ ಆಸಕ್ತಿ ತಳ್ಳಿ ಹಾಕಬಹುದು.ಮಗು ಚಿಕ್ಕದಿರಲಿ ದೊಡ್ಡದಿರಲಿ ಪ್ರತಿ ಅನುಭವವೂ ಹೊಸದಾಗಿ ಸೋಕುತ್ತಿರುವುದರಿಂದ ಗುರಿ ತೋರುವ ಗುರುವಾಗಿ ಮಕ್ಕಳ ಜೊತೆ ನಿಲ್ಲುವುದು ಶಿಕ್ಷಕರ ಕರ್ತವ್ಯ. ಜೊತೆಗೆ ಮಗುವಿನ ಹೆಜ್ಜೆಗೆ ಹೆಜ್ಜೆ ಕೂಡಿಸಬೇಕಾದದ್ದು ಪಾಲಕರ ಕರ್ತವ್ಯವು ಹೌದು.ಪ್ರತಿ ಹೆಜ್ಜೆಯನ್ನು ಅನುಮಾನಿಸುವುದು, ತಪ್ಪು ಹೆಜ್ಜೆ ಇಟ್ಟರೆ ಅವಮಾನಿಸುವುದು ಇಂತಹ ನಮ್ಮ ನಡವಳಿಕೆಗಳು ಆಗತಾನೆ ರೂಪು ಪಡೆಯುತ್ತಿದ್ದ ಮಗುವಿನ ಮನಸನ್ನು ಕದಡುತ್ತವೆ.ಮಗುವಿನ ಮಾನಸಿಕ ಸ್ವಾಸ್ತ್ಯ ಹಾಳು ಮಾಡುವ ಯಾವುದೇ ಅಧಿಕಾರ ನಮಗಿಲ್ಲ. ಮಗುವಿನ ಮಾನಸಿಕ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ಕಲಿಕೆ ಸಾಧ್ಯ.
