ವರದಿ ರಾಯಿ ರಾಜಕುಮಾರ
ಡಿಜಿಟಲ್ ಕೆಲಸದ ಒತ್ತಡ ನಿವಾರಿಸಿ, ಪ್ರೋತ್ಸಾಹ ಧನ ವಿಳಂಬವನ್ನು ಪರಿಹರಿಸಿ, ಸೇವಾ ಭದ್ರತೆಯನ್ನು ಒದಗಿಸಬೇಕೆಂದು ಹಾಗೂ ಇತರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಜಿಲ್ಲಾ ಆಶಾ ಕಾರ್ಯಕರ್ತೆಯರು ಹಾಗೂ ಜಿಲ್ಲಾ ಭಾರತೀಯ ಮಜ್ದೂರ್ ಸಂಘದ ಮುಂದಾಳುಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್ ಆರ್ ತಿಮ್ಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಿದರು.

ಕೋವಿಡ್ ಸಂದರ್ಭದಲ್ಲಿ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಿಗೆ ತಕ್ಕ ಗೌರವ, ಭದ್ರತೆ ಹಾಗೂ ನ್ಯಾಯವನ್ನು ಒದಗಿಸಿ ಕೊಡಬೇಕೆಂದು ಈ ಸಂದರ್ಭದಲ್ಲಿ ಕೇಳಲಾಯಿತು. ನಾಲ್ಕು ವರ್ಷಗಳಿಂದ ಪ್ರೋತ್ಸಾಹ ಧನದಲ್ಲಿ ಯಾವುದೇ ಹೆಚ್ಚಳ ಆಗದಿರುವುದರಿಂದ ಶೀಘ್ರದಲ್ಲಿ ಪ್ರೋತ್ಸಾಹ ಧನವನ್ನು ಹೆಚ್ಚಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್, ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗೋಪಾಲಕೃಷ್ಣ, ಜಿಲ್ಲಾ ಉಪಾಧ್ಯಕ್ಷ ರೋಹಿತಾಶ್ವ, ಆಶಾ ಕಾರ್ಯಕರ್ತೆಯರ ಮದ್ದೂರು ಸಂಘದ ರಾಜ್ಯ ಕಾರ್ಯದರ್ಶಿ ರೇವತಿ, ಬಂಟ್ವಾಳ ತಾಲೂಕು ಅಧ್ಯಕ್ಷ ತುಳಸಿ, ದೇವರಾಜ್, ಕಾರ್ಯದರ್ಶಿ ನೀಲಾಕ್ಷಿ, ಕೋಶಾಧಿಕಾರಿ ಸೌಮ್ಯ, ಗೌರವಾಧ್ಯಕ್ಷೆ ಗಿರಿಜಾ ನಾವೂರು ಉಪಸ್ಥಿತರಿದ್ದರು.
