ಕಾರ್ಕಳ: ಅಜೆಕಾರು ಪದ್ಮ ನಗರ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಜುಲೈ ಒಂದರಂದು ನಡೆಯಿತು. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಮತದಾನದ ಹಕ್ಕಿನ ಅರಿವು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಚುನಾವಣೆ ಆಯೋಜಿಸಲಾಗಿತ್ತು.



ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ಈ ಚುನಾವಣೆ ನಡೆಸಲಾಗಿದ್ದು, ಇ ವಿ ಎಂ ಮೂಲಕ ಮತದಾನ ಪ್ರಕ್ರಿಯೆ ಜರುಗಿತು. ವಿದ್ಯಾರ್ಥಿಗಳಿಗೆ ಮತದಾನದ ವಿಧಾನ, ಅಭ್ಯರ್ಥಿಗಳ ಆಯ್ಕೆ ಹಾಗೂ ಮತ ಚಲಾಯಿಸುವ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಮಚಂದ್ರ ನೆಲ್ಲಿಕಾರ್ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸು ಜಾಗೃತ ಮತದಾರರ ಮೇಲೆ ಅವಲಂಬಿತವಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಮತದಾನದ ಮಹತ್ವವನ್ನು ಅರಿತುಕೊಳ್ಳುವುದು ಅಗತ್ಯವಾಗಿದ್ದು ಇಂತಹ ಚುನಾವಣೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದರು.
ಸಂಸ್ಥೆಯ ಪ್ರಾಂಶುಪಾಲರಾದ ಸಂತೋಷ್ ಪೂಜಾರಿಯವರು ಪೂರ್ವಸಿದ್ಧತೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ಮಾರ್ಗದರ್ಶನ ಮಾಡಿದರು. ಉಪಪ್ರಾಂಶುಪಾಲರಾದ ಆರತಿ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದರು. ಸಮಾಜ ವಿಜ್ಞಾನ ಶಿಕ್ಷಕಿ ಆಶಾ ಜ್ಯೋತಿ ಚುನಾವಣೆಯನ್ನು ಸಂಘಟಿಸಿದರು. ಉಪಚುನಾವಣಾ ಅಧಿಕಾರಿಗಳಾಗಿ ಶಿಕ್ಷಕರುಗಳಾದ ಶ್ರೀನಿವಾಸ್ ನೆಲ್ಲಿಕಾರ್, ನವೀನ್, ಕಿರಣ್, ವಿಜೇತರಾಣಿ, ಕವಿತಾ, ಭಾವನ ಕಾರ್ಯನಿರ್ವಹಿಸಿ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿದರು.
