ಕ್ರೈಸ್ಟ್ ಕಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳಿಗೆ ಚಾಲನೆ ಮತ್ತು ತರಬೇತಿ ಕಾರ್ಯಕ್ರಮ

ಕಾರ್ಕಳ: ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಚಾಲನೆ ಮತ್ತು ತರಬೇತಿ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಕಳದ ಖ್ಯಾತ ನ್ಯಾಯವಾದಿ ಹಾಗೂ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ರೊ. ವಿಜೇಂದ್ರ ಕುಮಾರ್ ಅವರು ದೀಪ ಬೆಳಗಿ ಎನ್‍ಎಸ್‍ಎಸ್‍ನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಸಾಮಾಜಿಕ ಬದುಕಿನ ಜ್ಞಾನಾನುಭವ ಪಡೆಯಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ. ಕೇವಲ ಶಿಕ್ಷಣ ಪಡೆದ ಮಾತ್ರಕ್ಕೆ ಅತ್ಯುತ್ತಮ ವ್ಯಕ್ತಿತ್ವ ಮೂಡಿಬರುವುದಿಲ್ಲ. ರಾಷ್ಟ್ರೀಯ ಸೇವಾ ಯೋಜನೆಯಂತಹ ಪಠ್ಯೇತರ ಚಟುವಟಿಕೆಗಳು ನಮ್ಮನ್ನು ಸಮಾಜದ ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ. ನಾವು ಸಮಾಜಸೇವಾ ಗುಣವನ್ನು ರೂಡಿಸಿಕೊಳ್ಳಬೇಕು, ಆಗ ಸಮಾಜ ಕೂಡಾ ನಮಗೆ ಒಳಿತನ್ನು ಬಯಸುತ್ತದೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಕಾರ್ಕಳ ಭುವನೇಂದ್ರ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಹಾಗೂ ಎನ್‍ಎಸ್‍ಎಸ್ ಅಧಿಕಾರಿ ಶಂಕರ ಕುಡ್ವ ಅವರು ಮಾತನಾಡಿ “ರಾಷ್ಟ್ರೀಯ ಸೇವಾಯೋಜನೆ ನಮ್ಮಲ್ಲಿ ಧೈರ್ಯ, ಸೇವೆ ಹಾಗೂ ಸಾಹಸ ಗುಣಗಳನ್ನು ಉತ್ತೇಜಿಸುತ್ತದೆ. ಕಲಿಕೆಯ ಜೊತೆ ಜೊತೆಗೆ ಸಮಾಜಸೇವೆ ಮಾಡುವ ಅವಕಾಶವನ್ನು ಎನ್‍ಎಸ್‍ಎಸ್ ಕಲ್ಪಿಸಿಕೊಡುತ್ತದೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಲಕ್ಷ್ಮೀ ನಾರಾಯಣ ಕಾಮತ್ ಅವರು ಮಾತನಾಡಿ “ಶಿಸ್ತುಬದ್ಧ ಜೀವನ ನಮ್ಮ ಜವಾಬ್ಧಾರಿ, ದುಶ್ಟಟಗಳು, ದುರ್ವತನೆಗಳು ನಮ್ಮ ಜೀವನವನ್ನು ಹಾಳು ಮಾಡುತ್ತವೆ. ಇದನ್ನು ತಡೆಗಟ್ಟಿ ನಮ್ಮ ಗಮನವನ್ನು ಸಮಾಜ ಸೇವೆಯ ಕಡೆಗೆ ಹರಿಸಲು ಎನ್‍ಎಸ್‍ಎಸ್ ಒಂದು ಅಪೂರ್ವ ಅವಕಾಶ, ಅಡ್ಡದಾರಿಯಲ್ಲಿ ಸಾಗುವ ವಿದ್ಯಾರ್ಥಿಗಳನ್ನು ಸರಿದಾರಿಯಲ್ಲಿ ನಡೆಸಲು ರಾಷ್ಟ್ರೀಯ ಸೇವಾಯೋಜನೆ ಪ್ರಮುಖ ಸಾಧನ” ಎಂದು ಹೇಳಿದರು. ಈ ಸಂದರ್ಭದಲ್ಲಿ ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಂದ ತಾಯಿಯ ಮಹತ್ವ, ಯೋಗದ ಮಹತ್ವ ಹಾಗೂ ಮಾದಕದ್ರವ್ಯ ವಿರೋಧಿ ಕಿರುಪ್ರಹಸನಗಳು ನಡೆದವು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶಂಕರ ಕುಡ್ವ ಅವರು ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪ ಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕ್ರಿಸ್ಟೋಫರ್ ಕೋಟ್ಯಾನ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್‍ಎಸ್‍ಎಸ್ ಸಹಯೋಜನಾಧಿಕಾರಿ ಸುಕನ್ಯಾ ಜೈನ್ ಸ್ವಾಗತಿಸಿ ಎನ್‍ಎಸ್‍ಎಸ್ ಯೋಜನಾಧಿಕಾರಿ ದೀಪಕ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *