ಕಾರ್ಕಳ ಆರಕ್ಷಕ ಠಾಣೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಸಲುವಾಗಿ ಶಾಂತಿ ಸಭೆ

ಕಾರ್ಕಳ, ಸೆ. 09: ಗಣೇಶ ಚತುರ್ಥಿ ಹಬ್ಬದ ಸಲುವಾಗಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಕಾರ್ಕಳ ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಧರ್ಮಗಳ ಸಮಿತಿಯ ಪದಾಧಿಕಾರಿಗಳನ್ನೊಳಗೊಂಡ ಶಾಂತಿ ಸಭೆಯು ಕಾರ್ಕಳ ಎ ಎಸ್ ಪಿ ಇಷಿತಾ ಗುಪ್ತ ನೇತೃತ್ವದಲ್ಲಿ ನಡೆಯಿತು. ಯಾರಿಗೂ, ಯಾರ ಭಾವನೆಗಳಿಗೂ ತೊಂದರೆಯಾಗದಂತೆ ಶಾಂತಿಯುತವಾಗಿ ಸಂತೋಷದಿಂದ ಆಚರಿಸುವಂತೆ ಅವರು ಕರೆ ನೀಡಿದರು.

ಕಾಪು ವ್ರತ್ತ ನೀರಿಕ್ಷಕ ಅಜಮತ್ ಅಲಿ, ಪ್ರಾಸ್ತವಿಕವಾಗಿ ಮಾತನಾಡಿ ಗಣೇಶೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಿ, ಗಣೇಶ ವಿಸರ್ಜನೆಗೆ ಉಪಯೋಗಿಸುವ ವಾಹನ ಸುಸ್ಥಿತಿಯಲ್ಲಿದ್ದು, ವಾಹನ ಚಾಲನ ಪರವಾನಿಗೆ ಹೊಂದಿರುವ ಚಾಲಕರು, ಇನ್ಶೂರೆನ್ಸ್ ಹೊಂದಿರುವ ವಾಹನವನ್ನು ಬಳಸುವಂತೆ ಹಾಗೂ ನುರಿತ ಈಜುಗಾರರನ್ನು ನೇಮಿಸುವಂತೆ ಹಾಗೂ ಲೈಫ್ ಜಾಕೆಟ್ ಉಪಯೋಗಿಸುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಗ್ರಾಮಾಂತರ ಠಾಣಾ ಪಿಎಸ್ಐ ಪ್ರಸನ್ನ ಎಂ ಎಸ್ ಸ್ವಾಗತಿಸಿ, ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯನ್ನು ನಡೆಸುವ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ವಿವರವಾಗಿ ತಿಳಿಸಿದರು. ಗಣೇಶ ವಿಸರ್ಜನೆ ಸಂದರ್ಭದಲ್ಲಿ ರಾತ್ರಿ 10 ಗಂಟೆಯ ನಂತರ ಯಾವುದೇ ಡಿ ಜೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ, ಧ್ವನಿವರ್ಧಕ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸುವುದು. ಇಲ್ಲವಾದಲ್ಲಿ ಪರವಾನಿಗೆಯನ್ನು ರದ್ದು ಮಾಡಿ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು. ಆದರೆ ಶಾಂತವಾಗಿ ಎಷ್ಟು ರಾತ್ರಿಯಾದರೂ ಕಾರ್ಯಕ್ರಮ ಮುಗಿಯುವ ವರೆಗೂ ಪೊಲೀಸ್ ಇಲಾಖೆಯು ಸದಾ ನಿಮ್ಮೊಂದಿಗೆ ಕಾನೂನಾತ್ಮಕ ರೀತಿಯಲ್ಲಿ ಇರುತ್ತೇವೆ ಎಂದರು.

ಕಾರ್ಕಳ ನಗರ ಠಾಣಾ ಪಿಎಸ್ಐ ಶಿವಕುಮಾರ್, ಗಣೇಶೋತ್ಸವದ ರೂಪುರೇಷೆಗಳನ್ನು ವಿವರಿಸಿದರು.
ಗ್ರಾಮಾಂತರ ಕ್ರೈಂ ಎಸ್ ಐ ನವೀನ್ ಪಿ ಬೋರ್ಕರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *