ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಜಪ್ಪಿನಮೊಗರು, ಮಂಗಳೂರು ಇದರ ವಾರ್ಷಿಕ ಮಹಾಸಭೆಯು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾದ ಜೆ. ನಾಗೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಪ್ರಧಾನ ಕಾರ್ಯದರ್ಶಿ ಸುಭಾಷ್ ವಿ. ಅಡಪ ಅವರು ಸಭೆಗೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ವೈಷ್ಣವಿ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಸಭೆಗೆ ಚಾಲನೆ ನೀಡಲಾಯಿತು.
ಸಭೆಯಲ್ಲಿ ಈ ಬಾರಿ 18ನೇ ವರ್ಷದ ಜಪ್ಪಿನಮೊಗರು ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ ತಂತ್ರಿ ಅವರ ಪೌರೋಹಿತ್ಯದಲ್ಲಿ 2026ರ ಸೆಪ್ಟೆಂಬರ್ 13 ರಿಂದ 15ರ ವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮುಂದಿನ ಕಾರ್ಯಯೋಜನೆ, ಕ್ರೀಡೋತ್ಸವ ಆಯೋಜನೆ ಹಾಗೂ ಗಣೇಶೋತ್ಸವದ ಯಶಸ್ವಿ ನಿರ್ವಹಣೆಗಾಗಿ ನಿಧಿ ಸಂಗ್ರಹಣೆಯ ಕುರಿತು ಸುದೀರ್ಘ ಚರ್ಚೆ ನಡೆಯಿತು. ಬಳಿಕ 17ನೇ ವರ್ಷದ ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಶೈಲೇಶ್ ಭಂಡಾರಿ ತಾರ್ದೋಲ್ಯ ಸಭೆಯ ಮುಂದೆ ಮಂಡಿಸಿ ಅನುಮೋದನೆ ಪಡೆದರು.
ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಜೆ. ಅನಿಲ್ ಶೆಟ್ಟಿ ಜೆ. ಮನ್ಕು ತೋಟಗುತ್ತು, ಕಾರ್ಯಾಧ್ಯಕ್ಷರಾದ ಟಿ. ಪ್ರವೀಣ್ ಚಂದ್ರ ಆಳ್ವ, ಸುಧಾಕರ್ ಜೆ., ಲ| ಗಣೇಶ್ ಶೆಟ್ಟಿ ಕಂರ್ಬುಕೆರೆ, ಲ| ಶ್ರೀಧರ್ ರಾಜ್ ಶೆಟ್ಟಿ, ಉದಯ ಕೊಟ್ಟಾರಿ ಬಜಾಲ್ ಹಾಗೂ ಮುಖ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಬೀದಿ ಮನೆ ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷರಾದ ಟಿ. ಪ್ರವೀಣ್ ಚಂದ್ರ ಆಳ್ವರವರು ಮಾತನಾಡಿ, “ಜಪ್ಪಿನಮೊಗರು ಶ್ರೀ ಗಣೇಶೋತ್ಸವವು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಸರುವಾಸಿಯಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿದೆ. ಶ್ರೀ ಮಹಾಗಣಪತಿಯ ಕೃಪಾ-ಕಟಾಕ್ಷ ನಮ್ಮೆಲ್ಲರ ಮೇಲಿರಲಿ. ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ 18ನೇ ವರ್ಷದ ಗಣೇಶೋತ್ಸವವನ್ನು ಯಶಸ್ವಿಗೊಳಿಸೋಣ” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಸಂಪತ್ ತಾರ್ದೋಲ್ಯ, ನವೀನ್ ಸನಿಲ್ ತಾರ್ದೋಲ್ಯ, ಯೋಗೀಶ್ ಗಾಣಿಗ ತಾರ್ದೋಲ್ಯ , ರತ್ವೀಕ್ ರಾಜ್ ಶೆಟ್ಟಿ ಕಡೇಕಾರ್ ಹಾಗೂ ನವೀನ್ ಪೂಜಾರಿ ತಾರ್ದೋಲ್ಯ ಅವರನ್ನು ಸಮಿತಿಯ ನೂತನ ಸದಸ್ಯರಾಗಿ ಗೌರವಪೂರ್ವಕವಾಗಿ ಸೇರ್ಪಡೆಗೊಳಿಸಲಾಯಿತು.
ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, 18ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಯಶಸ್ವಿಯಾಗಿ ಆಚರಿಸಲು ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಸಂಚಾಲಕರಾದ ಹರೀಶ್ ಶೆಟ್ಟಿ ತಾರ್ದೋಲ್ಯ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯದರ್ಶಿಯಾದ ಕವಿತಾ ಗಂಗಾಧರ್ರವರು ಧನ್ಯವಾದವಿತ್ತರು.
