ಮಂಗಳೂರು: ಅಕಾಡೆಮಿಯಿಂದ ಕೊಂಕಣಿ ಮಾನ್ಯತಾ ದಿನಾಚರಣೆ

ಮಂಗಳೂರು: ಹೇಗೆ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಬಲಿದಾನ ಮಾಡಿದ್ದಾರೋ ಅದೇ ರೀತಿ ಭಾಷೆಗೆ ಮಾನ್ಯತೆ ದೊರಕಿಸಲು ನಮ್ಮ ಪೂರ್ವಸೂರಿಗಳು ಸೇವೆ ತ್ಯಾಗ ಮಾಡಿದ್ದಾರೆ. ಭಾಷೆಗೆ ಮಾನ್ಯತೆ ದೊರೆತ ನಂತರ ಕೊಂಕಣಿ ಬೆಳವಣಿಗೆ ಬಹಳ ಮಟ್ಟಿಗೆ ನಡೆದಿದೆ. ಇಂದಿನ ಡಿಜಿಟಲ್ ಮಾಧ್ಯಮದಲ್ಲಿ ಕೊಂಕಣಿಯನ್ನು ಬೆಳೆಸುವ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ ಎಂದು ಹಿರಿಯ ಕೊಂಕಣಿ ಸಾಹಿತಿ ಡೇವಿಡ್ ಡಿಸೋಜ ವಾಮಂಜೂರು ಹೇಳಿದರು. ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಂಡ್ ಸೊಭಾಣ್ ಸಹಯೋಗದಲ್ಲಿ ಶಕ್ತಿನಗರದ ಕಲಾಂಗಣದಲ್ಲಿ ಇಂದು ಆಗಸ್ಟ್ 20 ರಂದು ನಡೆದ 35ನೇ ಕೊಂಕಣಿ ಮಾನ್ಯತಾ ದಿನಾಚರಣೆ ಸಂದರ್ಭದಲ್ಲಿ ಕೊಂಕಣಿ ಬಾವುಟ ಏರಿಸಿ ಮಾತನಾಡಿದರು.

ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ಮಾತನಾಡಿ ಇಂದಿನ ಪೀಳಿಗೆ ಮಾನ್ಯತೆಗಾಗಿ ಹೋರಾಟ ಮಾಡಬೇಕಾಗಿಲ್ಲ, ಈ ದಿನವನ್ನು ಹಬ್ಬದಂತೆ ಆಚರಿಸಿ, ಮಾನ್ಯತೆಯನ್ನು ಅನುಭವಿಸಿ, ಭಾಷೆಯ ಬಗ್ಗೆ ಅಭಿಮಾನ ಬೆಳೆಸುವ ಜವಾಬ್ದಾರಿ ಹೊಂದಿದೆ ಎಂದು ಶುಭ ನುಡಿದರು.

ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತ ಕೋರಿದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಯುವ ಜನತೆ ಕೊಂಕಣಿ ಬಗ್ಗೆ ಅಭಿಮಾನ ಬೆಳೆಸಲು ಅಕಾಡೆಮಿ ಇಂತಹ ಕೆಲಸಗಳನ್ನು ಆಯೋಜಿಸುತ್ತಾ ಬರುತ್ತಿದೆ. ಸಾವಿರಾರು ಭಾಷೆಗಳಲ್ಲಿ 22 ಭಾಷೆಗಳಿಗೆ ಮಾತ್ರ ಸಂವಿಧಾನದ ಮಾನ್ಯತೆ ದೊರೆತಿದ್ದು, ಕೊಂಕಣಿ ಅದರಲ್ಲಿ ಒಂದು ಎಂಬ ಹೆಮ್ಮೆ ನಮ್ಮದಾಗಲಿ ಎಂದು ಹೇಳಿದರು.

ಮೊದಲಿಗೆ ಕಲಾಂಗಣದ ಮಹಾದ್ವಾರದಿಂದ ರಂಗು ರಂಗಿನ ಮೆರವಣಿಗೆ ನಡೆಯಿತು. ನಂತರ ಕೊಂಕಣಿ ಗೀತೆ ಹಾಡಲಾಯಿತು. ಅಕಾಡೆಮಿ ಸದಸ್ಯ ನವೀನ್ ಲೋಬೊ ಧನ್ಯವಾದ ಸಮರ್ಪಿಸಿ, ಸಮರ್ಥ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಅಕಾಡೆಮಿ ಮತ್ತು ಮಾಂಡ್ ಸೊಭಾಣ್ ಸದಸ್ಯರು ಉಪಸ್ಥಿತರಿದ್ದರು.
ನಂತರ ಉಭಯ ಜಿಲ್ಲೆಗಳಿಂದ ಬಂದ 17 ಪ್ರೌಢ ಶಾಲಾ ಮತ್ತು ಕಾಲೇಜು ತಂಡಗಳಿಗೆ ವಿವಿಧ ವಿನೋದಾವಳಿ ಸ್ಪರ್ಧೆಗಳು ಆರಂಭವಾದವು.

Leave a Reply

Your email address will not be published. Required fields are marked *