ಉಡುಪಿ: ಸರ್ವಋತು ಮಲ್ಪೆ ಬಂದರಿನ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದರೊಂದಿಗೆ ಮೀನುಗಾರರ ಮೀನುಗಾರಿಕಾ ಚಟುವಟಿಕೆಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಕೆ.ಎಸ್ ಬಸವಂತಪ್ಪ ಹೇಳಿದರು.

ಅವರು ಮಲ್ಪೆಯ ಮೀನುಗಾರರ ಸಂಘದಲ್ಲಿ ಸಂಘದ ಪಧಾಧಿಕಾರಿಗಳನ್ನು ಭೇಟಿ ಮಾಡಿ, ಮೀನುಗಾರರ ಕುಂದು ಕೊರತೆಗಳನ್ನು ವಿಚಾರಿಸಿ ಮಾತನಾಡುತ್ತಿದ್ದರು.
ಮಲ್ಪೆ ಮೀನುಗಾರಿಕಾ ಬಂದರು ಏಷ್ಯಾದಲ್ಲಿಯೇ ಎರಡನೇ ಮೀನುಗಾರಿಕಾ ಚಟುವಟಿಕೆಯ ಬಂದರು ಎಂಬ ಹೆಸರು ಪಡೆದಿದೆ. ಇದರ ಆಧುನೀಕರಣಕ್ಕೆ ಮೊದಲ ಆದ್ಯತೆ ನೀಡುವುದರೊಂದಿಗೆ ಕರಾವಳಿ ಭಾಗದ ಮೂರು ಜಿಲ್ಲೆಗಳ ಮೀನುಗಾರಿಕಾ ಉದ್ಯಮ ಉನ್ನತೀಕರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಮಾನ್ಯ ಮುಖ್ಯಮಂತ್ರಿಗಳು ಕರಾವಳಿ ಭಾಗದ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಿದ್ದು, ಈ ನಿಟ್ಟಿನಲ್ಲಿ ಸೆ. 18 ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಕರೆದು, ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಮಾಹಿತಿ ಪಡೆದು ಕರಾವಳಿ ಭಾಗದ ಮೀನುಗಾರಿಕಾ ಚಟುವಟಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸತನ್ನು ತರಲು ಕಾತರರಾಗಿದ್ದಾರೆ ಎಂದರು.
ಜಿಲ್ಲೆಯ ಕರಾವಳಿ ಭಾಗದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದ್ದಲ್ಲಿ ಸ್ಥಳೀಯ ಮೀನುಗಾರರಿಗೆ ಹಾಗೂ ಮೀನುಗಾರಿಕಾ ಚಟುವಟಿಕೆಗೆ ತೊಂದರೆ ಉಂಟಾಗಲಿದೆ ಎಂಬ ಅಳಲು ಸ್ಥಳೀಯ ಮೀನುಗಾರರಿಂದ ಕೇಳಿ ಬರುತ್ತಿದೆ. ಮೀನುಗಾರರ ಆಶಾ ಭಾವನೆಗೆ ಧಕ್ಕೆ ಆಗದ ರೀತಿಯಲ್ಲಿ ಮಾನದಂಡಗಳನ್ನು ಬಳಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಅನಾದಿ ಕಾಲದಿಂದಲೂ ಕರಾವಳಿ ಭಾಗದಲ್ಲಿ ಲಕ್ಷಾಂತರ ಮೀನುಗಾರರು ಮೀನುಗಾರಿಕೆ ವೃತ್ತಿಯಿಂದ ತಮ್ಮ ಜೀವನವನ್ನು ಕಟ್ಟಿಕೊಂಡು ಬಂದಿರುತ್ತಾರೆ. ಇವರುಗಳಿಗೆ ಮತ್ಸ್ಯಾಶ್ರಯ ಯೋಜನೆಯಡಿ ವಸತಿ ನಿರ್ಮಾಣಕ್ಕೆ 1.20 ಲಕ್ಷ ರೂ ಸಹಾಯಧನ ನೀಡುತ್ತಿದ್ದು, ಇದು ಮನೆಯ ಅಡಿಪಾಯಕ್ಕೆ ಸಾಲುವುದಿಲ್ಲ. ಈ ಅನುದಾನವನ್ನು ಹೆಚ್ಚಿಸಲು ಹಾಗೂ ಡೀಸೆಲ್ಗೆ ನೀಡುತ್ತಿರುವ ಸಹಾಯಧನವನ್ನು 300 ರಿಂದ 500 ಲೀ. ಗೆ ಹೆಚ್ಚಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಉತ್ತರ ಕರ್ನಾಟಕ ಭಾಗದ ರೈತರಿಗೆ ಕೃಷಿಗೆ ನೀಡುತ್ತಿರುವ ಸಹಾಯಧನ, ಪರಿಹಾರ ನಿಧಿ, ಬೆಂಬಲ ಬೆಲೆ ಸೇರಿದಂತೆ ಮತ್ತಿತರ ಪ್ರಾತಿನಿಧ್ಯವನ್ನು ಕರಾವಳಿ ಭಾಗದ ಮೀನುಗಾರರಿಗೆ ನೀಡುವಂತೆ ಮನವಿ ಮಾಡಿದ ಸಂಘದ ಪದಾಧಿಕಾರಿಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ ಮೀನುಗಾರರ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸುವುದರೊಂದಿಗೆ ಮೀನುಗಾರಿಕಾ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲು ಕ್ರಮವಹಿಸಲಾಗುವುದು ಎಂದರು.
ಶಾಸಕ ಯಶ್ಪಾಲ್ ಎ ಸುವರ್ಣ ಮಾತನಾಡಿ, ಕರಾವಳಿ ಭಾಗದ ಮೀನುಗಾರರು ತಮ್ಮ ಜೀವದ ಹಂಗು ತೊರೆದು ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 330 ಕಿ.ಮೀ ಕರಾವಳಿ ಭಾಗ ಹೊಂದಿರುವ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಧ್ವನಿಯಾಗಿ ಮಲ್ಪೆ ಮೀನುಗಾರರ ಸಂಘವು ಕೆಲಸ ಮಾಡುತ್ತಿದೆ. ಮೀನುಗಾರಿಕೆಯು ಕರಾವಳಿ ಭಾಗದ ಆರ್ಥಿಕತೆಗೆ ಹಾಗೂ ಜಿ.ಡಿ.ಪಿ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿದ್ದು, ಕರಾವಳಿ ಭಾಗಕ್ಕೆ ಉತ್ತಮ ಯೋಜನೆ ರೂಪಿಸಿ, ಹೆಚ್ಚಿನ ಅನುದಾನ ಒದಗಿಸಿದ್ದಲ್ಲಿ ಮೀನುಗಾರಿಕಾ ಚಟುವಟಿಕೆ ಮತ್ತಷ್ಟು ಪ್ರಾಬಲ್ಯ ಹೊಂದಲು ಸಾಧ್ಯವಾಗಲಿದೆ ಎಂದರು.
ಕರಾವಳಿ ಭಾಗದಲ್ಲಿ ಸಿ.ಆರ್.ಝಡ್ ಸಮಸ್ಯೆಯಿಂದ ಮೀನುಗಾರರಿಗೆ ಯಾವುದೇ ಆರ್ಥಿಕ ಸಹಾಯಧನ ಪಡೆಯಲು ಆಗುತ್ತಿಲ್ಲ. ಕೃಷಿಗೆ ನೀಡಲಾಗುವ ಸವಲತ್ತುಗಳನ್ನು ಸರಿಸಮಾನವಾಗಿ ಮೀನುಗಾರಿಕಾ ಚಟುವಟಿಕೆಗೂ ನೀಡಬೇಕು. ತುರ್ತು ಸಂದರ್ಭಗಳಲ್ಲಿ ಮೀನುಗಾರರನ್ನು ಬದುಕಿಸಿ ಅವರುಗಳ ಆರೋಗ್ಯ ಕಾಪಾಡಲು ಮಲ್ಪೆ ಭಾಗದಲ್ಲಿ ಸೀ- ಆಂಬುಲೆನ್ಸ್ ನ ವ್ಯವಸ್ಥೆ ಮಾಡಬೇಕು. ಈಗಿರುವ ಫಿಶರೀಸ್ ಶಾಲೆಗಳಿಗೆ ಹೊಸ ರೂಪ ನೀಡುವುದರೊಂದಿಗೆ ಅವುಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವರಲ್ಲಿ ಬೇಡಿಕೆ ಇಟ್ಟರು.
ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರರ ಸಂಘದ ವತಿಯಿಂದ ಮಲ್ಪೆ ಬಂದರಿನ ಹಾಗೂ ಮೀನುಗಾರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ ಗಫೂರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ಪ್ರಸಾದ್ ರಾಜ್ ಕಾಂಚನ್, ಸಂಘದ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
