ಉಡುಪಿ: ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಫರೀದ್ ಅವರು ಬಾರಕೂರಿನ ಸಂತೆಗುಡ್ಡೆ ಮಾಲೀಕ್ ದಿನಾರ್ ಜುಮ್ಮಾ ಮಸೀದಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾರಕೂರು ಇತಿಹಾಸ ಪ್ರಸಿದ್ಧವಾದ ಪವಿತ್ರ ಕ್ಷೇತ್ರ. ವಿಜಯನಗರದ ರಾಜರು ಸೇರಿದಂತೆ ಹಲವಾರು ರಾಜರು ಬಾರಕೂರನ್ನು ಆಳಿದರೂ ಸಹ, ರಾಜರೂ ಬದಲಾದರೂ, ಅಧಿಕಾರ ಬದಲಾದರೂ ಸಹ ಬಾರಕೂರಿನ ಸಂಸ್ಕೃತಿ ಮತ್ತು ಮೌಲ್ಯವನ್ನು ಶಾಶ್ವತವಾಗಿ ನೆಲೆನಿಲ್ಲುವಂತೆ ಮಾಡಿರುವುದು ದೊಡ್ಡ ಕೊಡುಗೆ. ಎಷ್ಟೇ ರಾಜರುಗಳು ಇಲ್ಲಿ ಆಡಳಿತ ನಡೆಸಿದರೂ ಸಹ ಇಂದಿಗೂ ಇಲ್ಲಿನ ಪರಂಪರೆಯನ್ನು ಇನ್ನೂ ಉಳಿಸಿಕೊಂಡು ಬರಲಾಗಿದೆ ಎಂದರು.
ಇಲ್ಲಿ ಪವಿತ್ರವಾದ ಹಲವಾರು ದೇವಸ್ಥಾನಗಳು, ಮಸೀದಿ, ಚರ್ಚ್ಗಳು ಇದ್ದು, ಎಲ್ಲಾ ಸಮುದಾಯದವರು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಭಾರತ ದೇಶದ ಸಂಸ್ಕೃತಿಯ ಪ್ರತಿಬಿಂಬ ಇಲ್ಲಿ ನೆಲೆಸಿರುವುದನ್ನು ನಾವು ಕಾಲಿಟ್ಟಾಗಲೇ ಕಾಣಬಹುದಾಗಿದೆ. ಬಾರಕೂರು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪ್ರದೇಶ. ಭಾರತದ ನಾಗರಿಕತೆ ವೈಭವ ಇರುವ ಪ್ರದೇಶ. ಸೌಹಾರ್ದತೆಯ, ಸಂಸ್ಕೃತಿಯ ಪ್ರತಿಬಿಂಬವಾಗಿ, ಮಾನವೀಯತೆಯ ಗುಣಗಳಿಗೆ ಗುರುತಿಸಿಕೊಳ್ಳುವ ಈ ಪ್ರದೇಶಕ್ಕೆ ನನ್ನ ನಮನ ಸಲ್ಲಿಸುತ್ತೇನೆ. ಸಹೋದರತೆಯ ಭಾವ, ಪ್ರೀತಿ ವಿಶ್ವಾಸವನ್ನು ಇಲ್ಲಿ ಆಕಸ್ಮಿಕ ಭೇಟಿಯ ವೇಳೆ ನಾನು ಕಂಡುಕೊಡ್ಡಿದ್ದೇನೆ ಎಂದರು.
ನಾವೆಲ್ಲರೂ ಪ್ರೀತಿ, ವಿಶ್ವಾಸ, ಸಂಸ್ಕೃತಿ, ಸೋದರತೆ ಭಾವ, ಪರಂಪರೆ, ಆಚಾರ-ವಿಚಾರವನ್ನು ಗುರು-ಹಿರಿಯರ ಮಾರ್ಗದರ್ಶನದಲ್ಲಿ ಶಾಶ್ವತವಾಗಿ ಮುಂದುವರೆಸಿಕೊಂಡು ಹೋಗುವ ಕೆಲಸ ಮಾಡಬೇಕು. ವಿಶ್ವಾಸಬದ್ಧ ಸಮಾಜ, ಅಭಿವೃದ್ಧಿಯ ಕರ್ನಾಟಕ ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವಜನಾಂಗದೊಂದಿಗೆ ಕೈಜೋಡಿಸೋಣ ಎಂದ ಅವರು, ಬಾರಕೂರಿನ ಐತಿಹಾಸಿಕ ಶ್ರೀಮಂತಿಕೆಯನ್ನು ಮರುಸೃಷ್ಠಿಸುವ ನಿಟ್ಟಿನಲ್ಲಿ ಬಾರಕೂರು ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಾರಕೂರಿನ ಐತಿಹಾಸಿಕ ಶ್ರೀಮಂತಿಕೆಯನ್ನು ಮರುಸೃಷ್ಠಿಸುವ ಹಾಗೂ ಇಲ್ಲಿನ ಇತಿಹಾಸವನ್ನು ಪುನರುಜ್ಜೀವನಗೊಳಿಸಲು ಅಗತ್ಯವಿರುವ ಯೋಜನೆಯನ್ನು ರೂಪಿಸಿ, ಗತವೈಭವ ಮತ್ತೆ ವಿಜೃಂಭಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಾಯಕರಾದ ಮೊಳಹಳ್ಳಿ ದಿನೇಶ್, ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
