ಅಜೆಕಾರು ಪದ್ಮನಗರ: ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತವಾಗಿ ಅಜೆಕಾರು ಜ್ಞಾನ ಸುಧಾ ಪದವಿಪೂರ್ವ ಕಾಲೇಜು ಮತ್ತು ಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪದ್ಮನಗರ ಇಲ್ಲಿ ನಡೆದಂತಹ ಯೋಗ ದಿನಾಚರಣೆಯಲ್ಲಿ ಆರೋಗ್ಯಕರ ಜೀವನಕ್ಕಾಗಿ ಯೋಗ ಎಂಬ ಘೋಷ ವಾಕ್ಯದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.


ವಿಶ್ವದ ಸಂಸ್ಕೃತಿ ಪರಂಪರೆಗೆ ಭಾರತ ಕೊಟ್ಟ ಅತ್ಯುತ್ತಮ ಕೊಡುಗೆ ಎಂದರೆ ಯೋಗ. ನಮ್ಮ ಪ್ರಾಚೀನ ಋಷಿಮುನಿಗಳ ಸಾವಿರಾರು ವರ್ಷಗಳ ಸಾಧನೆಯ ಫಲವಾಗಿ ಆವಿಷ್ಕಾರಗೊಂಡಿದ್ದೇ ಯೋಗ. ಯೋಗವು ಆರೋಗ್ಯಕರ ಜೀವನದ ಅಡಿಪಾಯವಾಗಿದೆ. ಮಾನವನಿಗೆ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವು ಅತ್ಯಗತ್ಯವಾಗಿದ್ದು ,ಅದಕ್ಕಾಗಿ ಈ ಯೋಗವು ಸಹಾಯ ಮಾಡುತ್ತದೆ. ಇದು ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟು ಕೊಳ್ಳಲು, ನಮ್ಮ ದೇಹವು ಆರೋಗ್ಯ ಪೂರ್ಣವಾಗಿ ಸುಸ್ಥಿರತೆಯಲ್ಲಿರಲು, ಸಹಾಯಮಾಡುತ್ತದೆ. ಯೋಗ ಎಂಬುದು ಕೇವಲ ಒಂದು ದಿನದ ಆಚರಣೆ ಆಗಿರದೆ, ಜೀವನದ ಅವಿಭಾಜ್ಯ ಅಂಗವನ್ನಾಗಿಸಬೇಕು. ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ ಮುನಿಯಾಲು ಇಲ್ಲಿನ ವೈದ್ಯಾಧಿಕಾರಿಯಾಗಿರುವಂತಹ ಡಾ. ಚಂದ್ರಿಕಾ ಕಿಣಿಯವರು ಅಭಿಪ್ರಾಯ ಪಟ್ಟರು. 9ನೇ ತರಗತಿಯ ವಿದ್ಯಾರ್ಥಿಯಾದ ಕುಮಾರ್ ಸೋಹನ್, ವಿಶ್ವ ಯೋಗ ದಿನಾಚರಣೆಯ ಮಹತ್ವದ ಕುರಿತಾಗಿ ತಿಳಿಸಿದನು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯೋಗ ಪಟು ವಿದ್ಯಾರ್ಥಿನಿ ಅನ್ವಿ ಅಂಚನ್ ರವರಿಗೆ ಸನ್ಮಾನಿಸಲಾಯಿತು ಹಾಗೂ ಇವರಿಂದ ಯೋಗ ಪ್ರಸ್ತುತತೆಯು ನೆರವೇರಿತು. ಆಗಮಿಸಿದ ಅತಿಥಿಗಳನ್ನು, ಉಪ ಪ್ರಾಂಶುಪಾಲರಾದ ಆರತಿ ಇವರು ಆದರದಿಂದ ಸ್ವಾಗತಿಸಿದರು. ಪ್ರಾಂಶುಪಾಲರಾದ ಸಂತೋಷ್ ಪೂಜಾರಿ ಇವರು ಸರ್ವರನ್ನು ಅಭಿವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ಯೋಗ ಗೀತೆಯನ್ನು ಹಾಡಿದರು. ವಿದ್ಯಾರ್ಥಿನಿ ಸಾನ್ವಿ ಶೆಟ್ಟಿ, ಕಾರ್ಯಕ್ರಮವನ್ನು ನಿರೂಪಿಸಿದರು.
