ಉಡುಪಿ: ಮನುಷ್ಯ ಮಾನವೀಯನಾಗುವುದು ಮೂಕಜ್ಜಿಯ ಸಂದೇಶ – ಪ್ರೊ. ಸ್ವೀವನ್ ಕ್ವಾಡ್ರಸ್

ಉಡುಪಿ: ಮನುಷ್ಯ ತನ್ನ ಎಲ್ಲಾ ಸಣ್ಣತನಗಳನ್ನು ಕಳೆದುಕೊಂಡು ಮಾನವೀಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಮೂಕಜ್ಜಿಯ ಕನಸು ಕಾದಂಬರಿಯ ಮುಖ್ಯ ಸಂದೇಶವಾಗಿದೆ. ಮೂಕಿಯಾಗಿದ್ದ ಮೂಕಜ್ಜಿ ಪ್ರತಿಯೊಂದನ್ನು ಪ್ರಶ್ನೆ ಮಾಡುತ್ತಾ ಮಾನವೀಯ ಗುಣಗಳನ್ನು ಸಮರ್ಥಿಸುವುದು ಮಹತ್ವದ್ದಾಗಿದೆ ಎಂದು ಲೇಖಕ ಪ್ರೊ. ಸ್ವೀವನ್ ಕ್ವಾಡ್ರಸ್ ಹೇಳಿದರು.
ಅವರು ಮಂಗಳವಾರ ಹಳೆಯಂಗಡಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಇವರ ಸಹಯೋಗದಲ್ಲಿ ನಡೆದ ಅರಿವಿನ ಬೆಳಕು ಉಪನ್ಯಾಸ ಮಾಲೆ-13 ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಸಿ ಮೂಕಜ್ಜಿಯ ಕನಸು ಒಂದು ಚಿಂತನೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕಿರಣ್ ಎಂ. ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿರುವ ಅನೇಕ ಮೌಢ್ಯ ಅಸಮಾನತೆ ಪದ್ಧತಿಗಳನ್ನು ಪ್ರಶ್ನಿಸುವ ಒಂದು ಕ್ರಾಂತಿಕಾರಿ ಮನೋಭಾವವನ್ನು ಮೂಕಜ್ಜಿಯ ಕನಸು ಪುಸ್ತಕವು ಮೂಢಿಸುತ್ತದೆ. ವಿದ್ಯಾರ್ಥಿಗಳಲ್ಲಿ ವೈಚಾರಿಕ ಅಲೋಚನೆ ಮತ್ತು ವೈಜ್ಞಾನಿಕ ಚಿಂತನೆ ಅತ್ಯಂತ ಮುಖ್ಯವಾದದ್ದು ಎಂದರು.
ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ಡಾ. ಶಿವರಾಮ ಕಾರಂತರ ಬರಹಗಳು ಮೂಢಿಸುತ್ತದೆ. ವಿದ್ಯಾರ್ಥಿಗಳು ಅನಗತ್ಯ ವಿಚಾರಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡದೇ ಪುಸ್ತಕವನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸ ಲೋಕೇಶ್ ಉಪಸ್ಥಿತಿರಿದ್ದರು. ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಸತೀಶ್‍ ಕೊಡವೂರು ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *